ರಾಜ್ಯದಲ್ಲಿ ಹೃದಯಾಘಾತ ಹಾಗೂ ಹಠಾತ್ ಸಾವು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲು ಯೋಜಿಸಿದೆ. ಆಸ್ಪತ್ರೆಗಳಿಗೆ ಮತ್ತು ಸಾರ್ವಜನಿಕರಿಗೆ ಹಲವು ಸೂಚನೆಗಳನ್ನು ನೀಡಲಿದೆ. ಹೃದಯಾಘಾತಕ್ಕೆ ಕೊರೋನ ಲಸಿಕೆ ಕಾರಣವೇ ಎಂಬ ಅನುಮಾನ ಇದ್ದು, ಮರಣೋತ್ತರ ಪರೀಕ್ಷೆ ಕಡ್ಡಾಯ ಮಾಡಲು ಸರ್ಕಾರ ಮುಂದಾಗಿದೆ.
ಹಠಾತ್ ಸಾವು ಅಥವಾ ಹೃದಯಾಘಾತದ ಎಲ್ಲ ಪ್ರಕರಣಗಳನ್ನು ಆಸ್ಪತ್ರೆಗಳಲ್ಲಿ ದಾಖಲು ಮಾಡಬೇಕು. ರೋಗಿಗಳ ಹೃದಯ ಸಂಬಂಧಿ ಸಮಸ್ಯೆಗಳ ವಿವರಗಳನ್ನು ವಿಶೇಷ ರಿಜಿಸ್ಟರ್ನಲ್ಲಿ ದಾಖಲಿಸಬೇಕು. ಹೃದಯಾಘಾತದಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆ ಕಡ್ಡಾಯ. ಹೃದಯದ ಸಮಸ್ಯೆಗಳ ತಪಾಸಣೆ ಮಾಡಿ ಬೇಗ ಪತ್ತೆಹಚ್ಚಬೇಕು. ಜಿಲ್ಲಾ ಆಸ್ಪತ್ರೆಗಳಲ್ಲಿ ಹೃದಯ ಥಿನ್ನರ್ ಔಷಧಿಗಳ ಹಾಗೂ ತುರ್ತು ಔಷಧಗಳ ಸ್ಟಾಕ್ ಇರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಹೃದಯಾಘಾತದ ಕುರಿತು ಜಾಗೃತಿ ಮೂಡಿಸಲು ಕ್ರಮವಹಿಸಬೇಕು. ಹೃದಯ ಸಂಬಂಧಿ ಸಮಸ್ಯೆಗೆ ಈಸಿಜಿ ಮಾಡಿ ಜಯದೇವ ಆಸ್ಪತ್ರೆಗಳ ತಜ್ಞರ ಅಭಿಪ್ರಾಯ ಪಡೆಯಬೇಕು ಎಂದು ಆಸ್ಪತ್ರೆಗಳಿಗೆ ಸರ್ಕಾರ ಸೂಚನೆ ನೀಡಲಿದೆ.
ಸಾರ್ವಜನಿಕರು ಹೃದಯ ಸಂಬಂಧಿ ಸಮಸ್ಯೆ ನಿರ್ಲಕ್ಷ್ಯ ಮಾಡಬಾರದು.ಹೃದಯಾಘಾತದ ಲಕ್ಷಣಗಳು ಕಾಣಿಸಿದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಬೇಕು. ಸಕ್ಕರೆ ಮತ್ತು ಉಪ್ಪಿನ ಪ್ರಮಾಣ ಸೇವನೆ ತಗ್ಗಿಸಬೇಕು, ಕನಿಷ್ಠ ಆರು ಗಂಟೆ ನಿದ್ರಿಸಬೇಕು, ಪೋಷಕರು ಮಕ್ಕಳ ಮೊಬೈಲ್ ಸ್ಕ್ರೀನ್ ಟೈಮ್ ಕಡಿಮೆ ಮಾಡಬೇಕು. ಉದ್ಯೋಗದಲ್ಲಿ ಉಂಟಾಗುವ ಒತ್ತಡ ಕಡಿಮೆ ಮಾಡಬೇಕು. ಹೃದಯದ ಸಮಸ್ಯೆಗಳ ತಪಾಸಣೆ ಆಗಾಗ ಮಾಡಿಸಬೇಕು. 15 ವರ್ಷದೊಳಗಿನ ಶಾಲಾ ಮಕ್ಕಳಿಗೆ ಹೃದಯ ತಪಾಸಣೆ ಮಾಡಬೇಕು ಎಂದು ತಿಳಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸಂಪೂರ್ಣ ನಿಷೇಧ, 18 ವರ್ಷದೊಳಗಿನವರಿಗೆ ಧೂಮಪಾನ ಮತ್ತು ಮದ್ಯಪಾನ ಮಾರಾಟ ಬಂದ್, ಬಿಪಿ, ಶುಗರ್, ಅಥವಾ ಹೆಚ್ಚು ತೂಕ ಹೊಂದಿರುವವರು ಮಾಸ್ಟರ್ ಚೆಕ್-ಅಪ್ ಮಾಡಿಸಿಕೊಳ್ಳಬೇಕು. ಜಿಮ್ಗಳ ತರಬೇತುದಾರರು ಸಿಪಿಆರ್ ತರಬೇತಿ ಪಡೆದಿರಬೇಕು.ಬಸ್ ನಿಲ್ದಾಣ, ರೈಲು ನಿಲ್ದಾಣ, ಮಾಲ್, ವಿಮಾನ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಡಿಯಾಕ್ ಅರೆಸ್ಟ್ ಸಂಭವಿಸಿದಾಗ ಸೂಕ್ತ ಪ್ರಾಥಮಿಕ ಚಿಕಿತ್ಸೆ ನೀಡಲು ಸಿದ್ಧತೆ ಇರಬೇಕು. ಕುಸಿದು ಬಿದ್ದ ವ್ಯಕ್ತಿಗಳಿಗೆ ತಕ್ಷಣ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ವ್ಯವಸ್ಥೆ ಇರಬೇಕು ಎಂದು ಸರ್ಕಾರ ಸೂಚಿಸಿದೆ.
ಹೃದಯಾಘಾತದಿಂದ ಮೃತಪಟ್ಟವರ ಕಾರ್ಡಿಯಾಕ್ ಮಸಲ್ ಬಯಾಪ್ಸಿ ನಡೆಸುವ ಯೋಜನೆ ಇದೆ. ಇದರಿಂದ ಕೊರೋನ ಸೋಂಕು,ಲಸಿಕೆ ಹೃದಯಾಘಾತಕ್ಕೆ ನೇರ ಕಾರಣವಾಗಿತ್ತೇ ಅಥವಾ ಇಲ್ಲವೇ ಎಂಬ ಅಂಶವನ್ನು ವೈಜ್ಞಾನಿಕವಾಗಿ ತಿಳಿಯಬಹುದು. ಹೀಗಾಗಿ ರಾಜ್ಯ ಆರೋಗ್ಯ ಇಲಾಖೆ ಮರಣೋತ್ತರ ಪರೀಕ್ಷೆ ಕಡ್ಡಾಯ ಮಾಡಲಿದೆ.