ಚಿತ್ರದುರ್ಗದ ರೇಣುಕಾಚಾರ್ಯ ಕೊಲೆ ಪ್ರಕರಣದ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ಗೆ ಮತ್ತೆ ಬೆನ್ನುನೋವು ಹೆಚ್ಚಾದ ಹಿನ್ನೆಲೆಯಲ್ಲಿ ಹೀಟಿಂಗ್ ಬೆಲ್ಟ್ ಒದಗಿಸಲು ಜೈಲಿನ ವೈದ್ಯಾಧಿಕಾರಿಗಳು ಪತ್ರ ಬರೆದಿದ್ದಾರೆ.
ಕಾರಾಗೃಹ ಆಸ್ಪತ್ರೆಯ ಮುಖ್ಯ ವೈದ್ಯರು, ಸಿ.ವಿ.ರಾಮನ್ ನಗರ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಿಗೆ ಹೀಟಿಂಗ್ ಬೆಲ್ಟ್ ಒದಗಿಸಲು ಮತ್ತು ಅಗತ್ಯ ಇರುವವರೆಗೂ ಫಿಸಿಯೋಥೆರಪಿ ಚಿಕಿತ್ಸೆ ಒದಗಿಸಲು ಮನವಿ ಮಾಡಿದ್ದಾರೆ. ಇತ್ತೀಚೆಗೆ ಜೈಲಿನಲ್ಲಿ ಬೆನ್ನುನೋವಿಗೆ ನಟ ದರ್ಶನ್ ಒಳಗಾಗಿದ್ದರು.
ಜೈಲಿನ ವೈದ್ಯರು ದರ್ಶನ್ಗೆ ಈ ಹಿಂದೆ ಚಿಕಿತ್ಸೆ ನೀಡಿದ್ದರು. ಬಳಿಕ ಸಿ.ವಿ.ರಾಮನ್ ಆಸ್ಪತ್ರೆ ಫಿಸಿಯೋಥೆರಪಿ ತಂಡ ಚಿಕಿತ್ಸೆ ನೀಡಿದೆ. ಅಕ್ಟೋಬರ್ 10ರಂದು ಜೈಲಿಗೆ ತೆರಳಿ ವೈದ್ಯರು ಚಿಕಿತ್ಸೆ ನೀಡಿದ್ದರು. ಮತ್ತೆ ನಃ ಚಿಕಿತ್ಸೆ ಅಗತ್ಯ ಇರುವವರೆಗೂ ಕಾರಾಗೃಹಕ್ಕೆ ವೈದ್ಯರ ತಂಡ ನಿಯೋಜಿಸಲು ಮನವಿ ಮಾಡಲಾಗಿದೆ. ಕಾನೂನು ಸೇವಾ ಪ್ರಾಧಿಕಾರದ ವರದಿಯಲ್ಲಿ ಬೆನ್ನು ನೋವಿನ ಬಗ್ಗೆಯೂ ಉಲ್ಲೇಖಿಸಲಾಗಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲೇ ದರ್ಶನ್ಗೆ ಚಿಕಿತ್ಸೆ ಮುಂದುವರಿಸಲಾಗಿದೆ.
ಜೈಲಿನ ನಿಯಮಾನುಸಾರ ಎಲ್ಲ ಸೌಲಭ್ಯ ನೀಡಿರುವ ಬಗ್ಗೆ ಕಾನೂನು ಸೇವಾ ಪ್ರಾಧಿಕಾರವು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ಬೆನ್ನಲ್ಲೇ ಕೊಲೆ ಆರೋಪಿ ದರ್ಶನ್ ಕಾರಾಗೃಹದಲ್ಲಿ ಸಹ ಕೈದಿಗಳೊಂದಿಗೆ ಕೂಗಾಡಿ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ.
ನ್ಯಾಯಾಲಯದ ಸೂಚನೆಯಂತೆ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಕೊಲೆ ಆರೋಪಿ ದರ್ಶನ್ಗೆ ನೀಡಿರುವ ಸೌಲಭ್ಯಗಳನ್ನು ವೀಕ್ಷಿಸಿ ಶನಿವಾರ ನ್ಯಾಯಾಲಯಕ್ಕೆ ವರದಿ ನೀಡಿದ್ದರು. ವರದಿಯಲ್ಲಿ ನಿಯಾಮಾನುಸಾರ ಆರೋಪಿಗೆ ಸೌಲಭ್ಯ ನೀಡಲಾಗಿದೆ ಎಂದು ಉಲ್ಲೇಖಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿದೆ. ವಿಚಾರ ತಿಳಿದ ಬಳಿಕ ದರ್ಶನ್ ಸಹ ಕೈದಿಗಳೊಂದಿಗೆ ಕೂಗಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಹೀಗೆ ಜೈಲಿನಲ್ಲಿ ಸಾಯಬೇಕಾ ಎಂದು ಚೀರಾಡಿದ್ದಾರೆ. ಸಹ ಕೈದಿ ನಾಗರಾಜ್ ಎಂಬಾತ ದುಃಖತಪ್ತ ದರ್ಶನ್ಗೆ ಸಂಆಧಾನ ಹೇಳಿದ್ದಾನೆ. ಉಳಿದ ಕೈದಿಗಳು ದರ್ಶನ್ ಜೊತೆ ಮಾತನಾಡಿಲ್ಲ, ದರ್ಶನ್ ಹತಾಶೆ ನೋಡಿ ಅಂತರ ಕಾಯ್ದುಕೊಂಡಿ ದ್ದರು ಎನ್ನಲಾಗಿದೆ.