ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರು ಅಲ್ಲಿನ ಕಠಿಣ ನಿಯಮಗಳಿಂದ ರೋಸಿದ್ದು, ಸಹ ಕೈದಿಗಳಿಗೆ ಕಿರುಕುಳ ನೀಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಇತ್ತೀಚೆಗೆ ಜೈಲಿನ ಪಾರ್ಟಿ ವೀಡಿಯೊ ವೈರಲ್ ಆಗುತ್ತಿದ್ದಂತೆ ಜೈಲಿನಲ್ಲಿ ನಿಯಮಗಳು ಮತ್ತಷ್ಟು ಬಿಗಿಯಾಗಿವೆ. ಅಂಶು ಕುಮಾರ್ ಜೈಲಿನ ಮುಖ್ಯ ಅಧೀಕ್ಷಕರಾಗಿ ಆಗಿ ನೇಮಕಗೊಂಡಿದ್ದು, ಜೈಲಿನಲ್ಲಿ ಕಠಿಣ ನಿಯಮಗಳನ್ನು ಅನುಷ್ಠಾನಗೊಳಿಸಿದ್ದಾರೆ. ಈಗ ದರ್ಶನ್ ಸಾಲಿನಲ್ಲಿ ನಿಂತು ತಾವೇ ಊಟ ತೆಗೆದುಕೊಂಡು ಬರಬೇಕಿದೆ. ಒಳಗಿನ ಶೌಚಾಲಯ ತಾವೇ ಕ್ಲೀನ್ ಮಾಡಬೇಕಿದೆ. ಈ ನಿಯಮಗಳಿಂದ ದರ್ಶನ್ ತತ್ತರಿಸಿದ್ದಾರೆಂದು ಹೇಳಲಾಗುತ್ತಿದೆ.
ದರ್ಶನ್ ಜೊತೆ ಒಂದೇ ಸೆಲ್ನಲ್ಲಿ ಅನುಕುಮಾರ್, ಜಗ್ಗ, ನಾಗರಾಜು, ಪ್ರದೋಶ್, ಲಕ್ಷ್ಮಣ್ ಇದ್ದಾರೆ. ಇವರೆಲ್ಲರೂ ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಜೈಲು ಪಾಲಾದವರು. ನಾಗರಾಜು ಅವರನ್ನು ಹೊರತುಪಡಿಸಿ ಉಳಿದ ಆರೋಪಿಗಳಿಗೆ ದರ್ಶನ್ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ದರ್ಶನ್ ಸೆಲ್ನಲ್ಲಿ ಜಗ್ಗ ಹಾಗೂ ದರ್ಶನ್ ಮಧ್ಯೆ ದೊಡ್ಡ ಜಗಳ ಆಗಿದೆ. ಜೈಲು ಅಧಿಕಾರಿಗಳು ಜಗಳ ಬಿಡಿಸಿದ್ದಾರೆ. ಮಲಗಿದ್ದ ಸಹ ಕೈದಿಗಳನ್ನು ಕಾಲಿನಲ್ಲಿ ಒದ್ದು ಎಬ್ಬಿಸಿ ದರ್ಶನ್ ಅವಾಚ್ಯವಾಗಿ ನಿಂದಿಸಿರುವ ಆರೋಪವಿದೆ.
ವಕೀಲರ ನೇಮಕ ವಿಚಾರವಾಗಿ ಗಲಾಟೆ ಶುರುವಾಗಿದೆ. ನಾನು ಇಲ್ಲೇ ಇದ್ದರೆ ಸಾಯೋದಾಗಿ ಅನುಕುಮಾರ್ ಹೇಳಿಕೊಂಡಿದ್ದು. ಅನುಕುಮಾರ್ಗೆ ಜಾಮೀನು ಸಿಗುತ್ತಿಲ್ಲ ಹಾಗೂ ದರ್ಶನ್ ನೀಡುವ ಚಿತ್ರಹಿಂಸೆ ತಡೆಯಲಾಗುತ್ತಿಲ್ಲ . ಹೀಗಾಗಿ ಅಧಿಕಾರಿಗಳು ದರ್ಶನ್ ಇರುವ ಸೆಲ್ ಮೇಲೆ ವಿಶೇಷ ನಿಗಾ ವಹಿಸಿದ್ದಾರೆ. ಟಾರ್ಚರ್ ತಡೆಯಲಾರದೆ ಅನುಕುಮಾರ್, ಜಗದೀಶ್ ಅವರು ತಮ್ಮನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.


