ಮೈನ್ಪುರಿ: ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯ ದಿಹುಲಿ ಗ್ರಾಮದಲ್ಲಿ ನಾಲ್ಕು ದಶಕಗಳ ಹಿಂದೆ ನಡೆದಿದ್ದ ೨೪ ದಲಿತರ ಹತ್ಯಾಕಾಂಡ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.
ಈ ಪ್ರಕರಣದ ಆರೋಪಿಗಳಾದ ಡಕಾಯತರ ತಂಡದ ಮೂವರನ್ನು ಅಪರಾಧಿಗಳು ಎಂದು ಘೋಷಿಸಿ ಸ್ಥಳೀಯ ನ್ಯಾಯಾಲಯ ಬುಧವಾರ ಆದೇಶಿಸಿದೆ.
‘ಕಪ್ತಾನ್ ಸಿಂಗ್, ರಾಮ್ ಪಾಲ್ ಮತ್ತು ರಾಮ್ ಸೇವಕ್ ಎಂಬುವವರು ದಿಹುಲಿ ದಲಿತ್ ಹತ್ಯಾಕಾಂಡದ ಅಪರಾಧಿಗಳಾಗಿದ್ದು, ಇವರಿಗೆ ಮಾರ್ಚ್ 18ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗುವುದು ಎಂದು ವಿಶೇಷ ನ್ಯಾಯಾಧೀಶೆ ಇಂದಿರಾ ಸಿಂಗ್ ಘೋಷಿಸಿದರು’ ಎಂದು ಸರ್ಕಾರಿ ಅಭಿಯೋಜಕ ಪುಷ್ಪೇಂದ್ರ ಸಿಂಗ್ ಚವ್ಹಾಣ್ ತಿಳಿಸಿದ್ದಾರೆ.
ಘಟನೆ ಹಿನ್ನೆಲೆ: ೧೯೮೧ರ ನ. ೧೮ರಂದು ನಡೆದ ಈ ಹತ್ಯಾಕಾಂಡದಲ್ಲಿ ಸಂತೋಷ್ ಸಿಂಗ್ ಎಂಬ ಡಕಾಯಿತರ ಗುಂಪಿನ ನಾಯಕನ ಆಜ್ಞೆಯಂತೆ ರಾಧೇ ಶ್ಯಾಮ್ ಎಂಬಾತ ದಿಹುಲಿ ಗ್ರಾಮದ ದಲಿತ ಸಮುದಾಯದ ಮೇಲೆ ದಾಳಿ ಮಾಡಿದ್ದ.
ಗುಂಡಿನ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ೨೪ ಜನ ಮೃತಪಟ್ಟಿದ್ದರು. ನಂತರ ಅವರ ಬಳಿ ಇದ್ದ ವಸ್ತುಗಳನ್ನು ದೋಚಿದ್ದರು. ಈ ಕುರಿತು ಜಸರಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಡಕಾಯಿತರ ತಂಡದ ಮುಖಂಡ ಸಂತೋಷ್ ಮತ್ತು ರಾಧೇ ಒಳಗೊಂಡು ೧೭ ಜನರ ವಿರುದ್ಧ ದೋಷಾರೋಪ ಸಲ್ಲಿಸಿದ್ದರು. ವಿಚಾರಣೆ ಹಂತದಲ್ಲಿ 17 ಆರೋಪಿಗಳಲ್ಲಿ ಸಂತೋಷ್ ಮತ್ತು ರಾಧೇ ಸೇರಿ ೧೩ ಜನ ಮೃತಪಟ್ಟಿದ್ದಾರೆ. ಬದುಕುಳಿದಿರುವ ನಾಲ್ವರಲ್ಲಿ 40 ವರ್ಷಗಳ ಬಳಿಕವೂ ಒಬ್ಬ ನಾಪತ್ತೆಯಾಗಿದ್ದಾನೆ. ಉಳಿದ ಮೂವರು ವಿಚಾರಣೆ ಎದುರಿಸಿದ್ದರು ಎಂದು ಪುಷ್ಪೇಂದ್ರ ಸಿಂಗ್ ತಿಳಿಸಿದ್ದಾರೆ.