ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬೆಳಗಾವಿಯಲ್ಲಿ ಎಂಎಲ್ಸಿ ಸಿಟಿ ರವಿ ಅವರು ಅಶ್ಲೀಲ ಪದ ಬಳಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ರವಿ ಕುಮಾರ್ ಹಾಗೂ ಅರುಣ್ ಎಂಬವರು ನೀಡಿರುವ ದೂರನ್ನು ಆಧರಿಸಿ ವಿಧಾನಪರಿಷತ್ನ ಹಕ್ಕು ಬಾಧ್ಯತಾ ಸಮಿತಿ ಅಧಿಕಾರಿಗಳಿಗೆ ಬುಲಾವ್ ನೀಡಿದೆ.
ಖುದ್ದು ಹಾಜರಾಗುವಂತೆ ಸಮಿತಿಯು ಬೆಳಗಾವಿ ಸಿಟಿ ಪೊಲೀಸ್ ಕಮಿಷನರ್ ಗೆ ಖುದ್ದು ಸೂಚಿಸಿದ್ದು, ನಾಳೆ ಬೆಳಗ್ಗೆ ೧೧ ಕ್ಕೆ ಹಕ್ಕು ಬಾಧ್ಯತಾ ಸಮಿತಿ ಮುಂದೆ ಬೆಳಗಾವಿ ಸಿಟಿ ಕಮಿಷನರ್ ಹಾಜರಾಗಲಿದ್ದಾರೆ.
ಹಕ್ಕು ಬಾಧ್ಯತಾ ಸಮಿತಿ ಅಧ್ಯಕ್ಷ ನಾಗರಾಜ್ ಯಾದವ ಅವರು ಸಮಿತಿ ಮುಂದೆ ಹಾಜರಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಮಿತಿ ಅಧ್ಯಕ್ಷ ನಾಗರಾಜ್ ಯಾದವ್ ಅವರು ಈಗಾಗಲೇ ಬೆಳಗಾವಿ ಡಿಸಿಯಿಂದ ವಿವರಣೆ ಪಡೆದುಕೊಂಡಿದ್ದಾರೆ. ಸದನ ನಡೆಯುವ ಸಂದರ್ಭದಲ್ಲಿ ಶಾಸಕರಿಗೆ ಸೂಕ್ತ ರಕ್ಷಣೆ ಒದಗಿಸದ ಹಿನ್ನೆಲೆಯಲ್ಲಿ ಶಾಸಕರ ಹಕ್ಕು ಚ್ಯುತಿ ಸಂಬಂಧ ಹಕ್ಕು ಬಾಧ್ಯತಾ ಸಮಿತಿ ಮುಂದೆ ದೂರು ದಾಖಲಾಗಿದೆ.
ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಪರಿಶಿಷ್ಟ ಜಾತಿಯವರಿಗೆ ಸಾರ್ವಜನಿಕವಾಗಿ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ ಆರೋಪದಡಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದತ್ತಾತ್ರೇಯ ಇಕ್ಕಳಕಿ ನೀಡಿದ ದೂರಿನ ಅನ್ವಯ ರವಿಕುಮಾರ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್ಸಿ–ಎಸ್ಟಿ) ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲ್ಬುರ್ಗಿ ಜಿಲ್ಲಾಧಿಕಾರಿಯನ್ನ ಪಾಕಿಸ್ತಾನ ಎಜೆಂಟ್ ಅಂತ ಕರೆದಿದ್ದ ರವಿಕುಮಾರ್ ವಿರುದ್ಧ ಈಗಾಗಲೇ ಡಿಸಿ ದೂರು ದಾಖಲಿಸಿದ್ದಾರೆ.