Friday, September 05, 2025
Menu

ಜಿಬಿಐಟಿ ಯೋಜನೆ ಭೂ ಸಂತ್ರಸ್ತ ರಿಗೆ ಎಕರೆಗೆ ₹1.50 ಕೋಟಿಯಿಂದ ₹2.50 ಕೋಟಿ ಪರಿಹಾರ: ಡಿಸಿಎಂ

ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆಯ ಭೂ ಸಂತ್ರಸ್ತ ರೈತರಿಗೆ ಆಯಾ ಜಮೀನಿನ ಮಾನದಂಡದ ಆಧಾರದ ಮೇಲೆ ಪ್ರತಿ ಎಕರೆಗೆ ₹1.50 ಕೋಟಿಯಿಂದ ₹2.50 ಕೋಟಿವರೆಗೂ ಪರಿಹಾರ ನೀಡಲು ತೀರ್ಮಾನಿಸಿಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಶಿವಕುಮಾರ್ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರದ ಲೋಗೋ, ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

2013ರ ಕಾಯ್ದೆ ಅನುಸಾರ ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ನೀಡಲು ತೀರ್ಮಾನಿಲಾಗಿದೆ. ಜಿಲ್ಲಾಡಳಿತ ಕಾನೂನು ಮಾನದಂಡಗಳ ಆಧಾರದ ಮುಖ್ಯರಸ್ತೆ ಬಳಿ ಇರುವ ಜಮೀನಿಗೆ, ಒಳಭಾಗದಲ್ಲಿರುವ ಜಮೀನಿಗೆ ದರ ನಿಗದಿ ಮಾಡಲಿದೆ. ರೈತರಿಗೆ ಯಾವುದೇ ರೀತಿ ಅನ್ಯಾಯ ಆಗಬಾರದು ಎಂಬ ಉದ್ದೇಶದಿಂದ ರಾಜ್ಯದ ಯಾವುದೇ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೈಗೊಳ್ಳಲಾಗದ ತೀರ್ಮಾನವನ್ನು ಇಲ್ಲಿ ಮಾಡಿದ್ದೇವೆ. ಹಣ ಪಡೆಯದೇ ಭೂಮಿಯನ್ನು ಹಂಚಿಕೊಳ್ಳುವ ರೈತರಿಗೆ 50:50 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ಭೂಮಿಯನ್ನು ನೀಡಲಾಗುವುದು ಎಂದು ತಿಳಿಸಿದರು..

“ಇದರ ಜೊತೆಗೆ ಅಂತಿಮ ಅಧಿಸೂಚನೆಯ ದಿನಾಂಕದಿಂದ ಹಣಕಾಸು/ ಅಭಿವೃದ್ಧಿಪಡಿಸಿದ ಜಾಗವನ್ನು ಪರಿಹಾರ ನೀಡುವವರೆಗೆ ರೈತರ ಜೀವನೋಪಾಯಕ್ಕೆ ಪ್ರತಿ ಎಕರೆಗೆ ವಾರ್ಷಿಕ ಅನು ದಾನ ನೀಡಲು ತೀರ್ಮಾನಿಸಲಾಗಿದೆ. ಖುಷ್ಕಿ ಭೂಮಾಲೀಕರಿಗೆ ವಾರ್ಷಿಕವಾಗಿ 30 ಸಾವಿರ, ತರಿ ಭೂಮಾಲೀಕರಿಗೆ ವಾರ್ಷಿಕವಾಗಿ 40 ಸಾವಿರ, ಭಾಗಾಯ್ತು ಭೂ ಮಾಲೀಕರಿಗೆ ವಾರ್ಷಿಕ 50 ಸಾವಿರ ಅನುದಾನ ನೀಡಲಾಗುವುದು. ಭೂ ರತಹಿತ ಕಾರ್ಮಿಕರಿಗೆ ಹಾಗೂ ಭೂಮಿಯ ದಾಖಲೆ ಇಲ್ಲದವರಿಗೆ ಒಂದು ನಿವೇಶನ ಹಾಗೂ ವಾರ್ಷಿಕ 25 ಸಾವಿರ ಅನುದಾನ ನೀಡಲು ತೀರ್ಮಾನಿ ಸಲಾಗಿದೆ. ಇದೆಲ್ಲದರ ಜೊತೆಗೆ ಆದಾಯ ತೆರಿಗೆ ವಿನಾಯಿತಿ, ಮುದ್ರಾಂಕ ಶುಲ್ಕ ವಿನಾಯಿತಿ ನೀಡಲಾಗುವುದು. ಈ ಇನ್ನು ಈ ನಗರಕ್ಕೆ ಕಲ್ಪಿಸಲಾಗುವ ರಸ್ತೆ ಸಂಪರ್ಕಕ್ಕೆ ಜಮೀನು ಕಳೆದುಕೊ ಳ್ಳುವವರಿಗೂ ಇದೇ ಮಾದರಿಯ ಪರಿಹಾರವನ್ನು ನೀಡಲಾಗುವುದು. ರೈತರು ದಾಖಲೆ ಸಮೇತ ಪರಿಹಾರಕ್ಕೆ ಅರ್ಜಿ ಹಾಕಿದರೆ, ಮೂರು ದಿನಗಳಿಂದಲೇ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪರಿಹಾರ ಬೇಕು ಎಂದು ಅರ್ಜಿ ಹಾಕಿರುವ ಸಹೋದರಿ ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಈ ಯೋಜನೆ ಜಾರಿಗೆ ತಮ್ಮ ತಕರಾರು ಇಲ್ಲ ಎಂದು 78% ರೈತರು ಜಮೀನು ನೀಡಲು ಮುಂದಾಗಿದ್ದಾರೆ. 18% ರೈತರು ಮಾತ್ರ ಭೂಸ್ವಾಧೀನ ಮಾಡಬೇಡಿ ಎಂದು ಕೇಳುತ್ತಿದ್ದಾರೆ. ನಾನು ಇವರಿಗೆ ಕೈಮುಗಿದು ಪ್ರಾರ್ಥಿಸುತ್ತೇನೆ, ನಾನು ವೈಯಕ್ತಿಕವಾಗಿ ತೀರ್ಮಾನ ಮಾಡಲು ಸಾಧ್ಯವಿಲ್ಲ. ನಾನು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕಿದೆ ನನ್ನನ್ನು ಕ್ಷಮಿಸಿ ಎಂದರು.

ದೇಶದ ಮೊದಲ ಇಂಟೆಗ್ರೇಟೆಡ್ ಕೃತಕ ಬುದ್ಧಿಮತ್ತೆ (AI) ನಗರ

ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಮೂಲಕ ದೇಶದ ಮೊದಲ ಇಂಟೆಗ್ರೇಟೆಡ್ ಕೃತಕ ಬುದ್ಧಿಮತ್ತೆ (AI) ನಗರ ನಿರ್ಮಾಣಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. 9,000 ಎಕರೆಯಷ್ಟು ಪ್ರದೇಶದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು ಭವಿಷ್ಯದಲ್ಲಿ ಇದು ಬೆಂಗಳೂರಿನ ಕೇಂದ್ರ ವ್ಯವಹಾರ ಜಿಲ್ಲೆಯಾಗಲಿದೆ (Central Business District). ಈ ನಗರವನ್ನು ಕೆಲಸ-ವಾಸ-ಉಲ್ಲಾಸ (Work-Live-Play) ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು.

ಈ ನಗರವು 300 ಮೀ. ಅಗಲದ ಬಿಸಿನೆಸ್ ಕಾರಿಡಾರ್ ಮೂಲಕ ಎಲ್ಲಾ ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸಲಿದೆ.  ಮೆಟ್ರೋ ಸಂಪರ್ಕವನ್ನು ವಿಸ್ತರಿಸುವ ಆಲೋಚನೆ ಇದೆ. ಎಐ, ಐಟಿ, ಸ್ಟಾರ್ಟ್ ಅಪ್ ಹಾಗೂ ಸೇವಾ ಕ್ಷೇತ್ರಗಳಲ್ಲಿ ಲಕ್ಷಾಂತರ ಹೊಸ ಉದ್ಯೋಗಗಳು ಸೃಷ್ಟಿಯಾಗಲಿದ್ದು,  ‘ಸ್ಥಳೀಯ ಪ್ರಥಮ ಉದ್ಯೋಗ ನೀತಿ’ ರೂಪಿಸಲಾಗುವುದು.  ಎಐ ಚಾಲಿತ ಮತ್ತು ಭವಿಷ್ಯಕ್ಕೆ ಸಿದ್ಧ ಉದ್ಯಮಗಳಿಗೆ ಸ್ಥಳೀಯರನ್ನು ಸಿದ್ಧಗೊಳಿಸಲು ಕೌಶಲ ಕೇಂದ್ರಗಳನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ದೇವೇಗೌಡರು ಹಾಗೂ ಇತರರ ಕಾಲದಲ್ಲಿ ಬಿಡದಿ ಕೈಗಾರಿಕಾ ಟೌನ್ ಶಿಪ್ ಮಾಡಿದಾಗ ಇಲ್ಲಿನ ಭೂಸ್ವಾಧೀನ ಪ್ರಕ್ರಿಯೆಯಲ್ಲಿ 5-6 ಲಕ್ಷ ಪರಿಹಾರ ನೀಡಲಾಗಿತ್ತು. ನಂತರ ಇದು 10 ಲಕ್ಷಕ್ಕೆ ಬಂದಿತ್ತು. ನನ್ನ ಅವಧಿಯಲ್ಲಿ ಬಿಡದಿ ಟೌನ್ ಶಿಪ್ ಜಾಗವನ್ನು ಡಿನೋಟಿಫಿಕೇಶನ್ ಮಾಡುವುದಿಲ್ಲ. ಆದರೆ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪ್ರಯತ್ನಿಸುತ್ತಿದ್ದೇನೆ ಎಂದು ವಿವರಿ ಸಿದರು.

8493 ಎಕರೆ ಪ್ರದೇಶ ಬಳಕೆ

ಸಮಗ್ರ ಉಪನಗರಕ್ಕೆ 09 ಗ್ರಾಮಗಳ 8493 ಎಕರೆ ಪ್ರದೇಶವನ್ನು ಬಳಸಿಕೊಳ್ಳಲಾಗುತ್ತಿದ್ದು, ಇದರಲ್ಲಿ 750 ಎಕರೆ ಸರ್ಕಾರಿ ಹಾಗೂ 6731 ಎಕರೆ ಖಾಸಗಿ ಮಾಲೀಕತ್ವದ ಪ್ರದೇಶಗಳಾಗಿವೆ. ಉಳಿದ 1012 ಎಕರೆ ಪ್ರದೇಶಗಳು ಜಲ ಮೂಲ ಪ್ರದೇಶಗಳಾಗಿವೆ. ಈ ಯೋಜನೆಗಾಗಿ ಬಿಎಂಆರ್ ಡಿಎ ಮೂಲಕ 2950 ಕೋಟಿ ಹಾಗೂ ಕರ್ನಾಟಕ ಸರ್ಕಾರದ ಶ್ಯೂರಿಟಿಯೊಂದಿಗೆ ಹಣಕಾಸು ಸಂಸ್ಥೆಗಳ ಮೂಲಕ 17,500 ಕೋಟಿ ಸಂಗ್ರಹಿಸಲಾಗುವುದು. 20 ಸಾವಿರ ಕೋಟಿಗೂ ಆರ್ಥಿಕ ಸಂಪನ್ಮೂಲ ಪೂರ್ಣಗೊಂಡ ನಂತರ ಭೂಸ್ವಾಧೀನ ಪ್ರಕ್ರಿಯೆ ಪರಿಹಾರ ವಿತರಣೆ ಆರಂಭಿಸ ಲಾಗುವುದು. ಈ ಯೋಜನೆಗೆ ಒಳಪಡುವ ಭೂ ಮಾಲೀಕರಿಗೆ 2013ರ ಕಾಯ್ದೆಯ ಪ್ರಕಾರ ಪುನರ್ವಸತಿ ಹಾಗೂ ಪುನಶ್ಚೇತನ (R&R) ನೀತಿ ಜಾರಿಗೊಳಿಸಲಾಗಿದೆ. ಬೈರಮಂಗಲ ಕೆರೆಯ ಪುನಶ್ಚೇತನಕ್ಕೆ ತೃತೀಯ ಶುದ್ದೀಕರಣ ಮೂಲಕ ನೀರನ್ನು ತುಂಬಿಸಲು 2 ಸಾವಿರ ಕೋಟಿ ವೆಚ್ಚದಲ್ಲಿ ಯೋಜನೆ ಕೈಗೊಳ್ಳಲಾಗುವುದು. 100 ಎಂಎಲ್ಡಿ ಶುದ್ದೀಕರಣ ಘಟಕ ಸ್ಥಾಪಿಸಲಾಗುವುದು ಎಂದರು.

ಕನಕಪುರದಲ್ಲಿ ಮೆಡಿಕಲ್ ಕಾಲೇಜಿಗೆ ಸಂಪುಟದಲ್ಲಿ ತೀರ್ಮಾನ

ಈ ಹಿಂದೆ ಕನಕಪುರದಲ್ಲಿ ಮೆಡಿಕಲ್ ಕಾಲೇಜು ಮಾಡಲು ಮುಂದಾದಾಗ ನಮ್ಮ ಕಾಲೇಜು ತೆಗೆದುಕೊಂಡು ಹೋಗುತ್ತಿದ್ದೀರಾ ಎಂದು ಇದೇ ರಾಮನಗರದಲ್ಲಿ ಪ್ರತಿಭಟನೆ ಮಾಡಿದರು. ನಾನು ನೀವು ಏನಾದರೂ ಮಾಡಿಕೊಳ್ಳಿ, ರಾಮನಗರ ಹಾಗೂ ಕನಕಪುರದಲ್ಲಿ ಮೆಡಿಕಲ್ ಕಾಲೇಜು ಮಾಡುವುದಾಗಿ ತಿಳಿಸಿದ್ದೆ ಎಂದರು. ನಮ್ಮ ಊರಿನ ಜನ ಬೆಂಗಳೂರಿಗೆ ಹೋಗುವ ಬದಲು, ನಮ್ಮ ಊರಿನಲ್ಲೇ ಬೆಂಗಳೂರನ್ನು ಕಾಣಬೇಕು, ಎಂಬುದು ನನ್ನ ಚಿಂತನೆ. ಸಚಿವ ಸಂಪುಟ ಸಭೆಯಲ್ಲಿ ರಾಮನಗರದ ಮೆಡಿಕಲ್ ಕಾಲೇಜು ಕಾಮಗಾರಿ ನಡೆಯುತ್ತಿದೆ. ಕನಕಪುರದ ಮೆಡಿಕಲ್ ಕಾಲೇಜಿಗೆ ವಸತಿ ಮಂಡಳಿಯಿಂದ 25 ಎಕರೆ ಜಾಗಕ್ಕೆ 60 ಕೋಟಿ ಮೀಸಲಿಡಲು ತೀರ್ಮಾನಿಸಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಉಳಿದ ಹಣ ಬರಲಿದೆ. ನಾವು ಕೊಟ್ಟ ಮಾತು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

Related Posts

Leave a Reply

Your email address will not be published. Required fields are marked *