Menu

ಸಣ್ಣ, ಮಧ್ಯಮ ಕೈಗಾರಿಕೆಗಳ ಸಮಸ್ಯೆ ಬಗೆಹರಿಸಲು ಬದ್ಧ: ಡಿಸಿಎಂ ಡಿಕೆ ಶಿವಕುಮಾರ್ ಭರವಸೆ

dk shivakumar

ಬೆಂಗಳೂರು: ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಶಕ್ತಿ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿ ಅಗತ್ಯ ನೆರವು ನೀಡುವುದು ಸರ್ಕಾರಗಳ ಜವಾಬ್ದಾರಿ. ಹೀಗಾಗಿ ನಿಮ್ಮ ಸಮಸ್ಯೆ ಬಗೆಹರಿಸಲು ನಾವು ಬದ್ಧವಾಗಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಶುಕ್ರವಾರ ನಡೆದ ಇಂಡಿಯಾ ಎಂಎಸ್ಎಂಇ ಸಮಾವೇಶದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭಾಗವಹಿಸಿ ಮಾತನಾಡಿದರು.

“ನಿಮ್ಮ ಸಮಸ್ಯೆಗಳ ಬಗ್ಗೆ ನಮಗೆ ಅರಿವಿದೆ. ನಿಮಗೆ ಅಗತ್ಯವಾಗಿರುವ ವಿದ್ಯುತ್ ಹಾಗೂ ನೀರಿನ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಾಗಿದೆ. 20 ವರ್ಷಗಳ ಹಿಂದೆ 70 ಲಕ್ಷ ಇದ್ದ ಜನಸಂಖ್ಯೆ ಈಗ 1.50 ಕೋಟಿಗೆ ಏರಿಕೆಯಾಗಿದೆ. ಆದರೆ ರಸ್ತೆಗಳ ಸಾಮರ್ಥ್ಯ ಹಾಗೇ ಇದೆ. ಇದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಬದಲಾವಣೆ ತರಲು ಕಳೆದ ಎರಡು ವರ್ಷಗಳಿಂದ ನಾನು ಯೋಜನೆ ರೂಪಿಸುತ್ತಿದ್ದೇನೆ. ಮೆಟ್ರೋ ಯೋಜನೆಗೆ 44 ಸಾವಿರ ಕೋಟಿ, ಟನಲ್ ರಸ್ತೆಗೆ 37 ಸಾವಿರ ಕೋಟಿ ಅದರಲ್ಲಿ ಮೊದಲನೇ ಹಂತಕ್ಕೆ 17 ಸಾವಿರ ಕೋಟಿ ಹಾಗೂ ಎಲಿವೇಟೆಡ್ ಕಾರಿಡಾರ್ ಗಳಿಗೆ 14 ಸಾವಿರ ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಒಟ್ಟಾರೆಯಾಗಿ ಮುಂದಿನ ನಾಲ್ಕೈದು ವರ್ಷಗಳಲ್ಲಿ ಬೆಂಗಳೂರಿನ ಅಭಿವೃದ್ಧಿಗೆ 1 ಲಕ್ಷ ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

“ನಾನು ಹಳ್ಳಿಯಲ್ಲಿ ಹುಟ್ಟಿದರೂ ವಿದ್ಯಾಭ್ಯಾಸ ಮಾಡಿದ್ದು ಬೆಂಗಳೂರಿನಲ್ಲಿ. ಮತ್ತೆ ರಾಜಕಾರಣವನ್ನು ಹಳ್ಳಿಯಿಂದ ಮಾಡಿದೆ. ಕೈಗಾರಿಕೆಗಳ ಹಿಂದೆ ಶ್ರಮ, ಅದರ ಫಲದ ಬಗ್ಗೆ ನನಗೆ ಅರಿವಿದೆ. ನಾನು ಯಾವುದೇ ಶಾಲಾ, ಕಾಲೇಜು ಕಾರ್ಯಕ್ರಮಕ್ಕೆ ಹೋದರೂ ಉದ್ಯೋಗ ಪಡೆಯುವುದಷ್ಟೇ ನಿಮ್ಮ ಗುರಿಯಾಗಬಾರದು, ನೀವುಗಳು ಉದ್ಯೋಗ ಸೃಷ್ಟಿಸುವಂತೆ ಬೆಳೆಯುವುದು ನಿಮ್ಮ ಕನಸಾಗಬೇಕು ಎಂದು ಹೇಳುತ್ತಿರುತ್ತೇನೆ” ಎಂದು ತಿಳಿಸಿದರು.

“ಪೀಣ್ಯ ಹಾಗೂ ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಪ್ರದೇಶಗಳು ಮೊದಲಿನಿಂದಲೂ ರಾಷ್ಟ್ರ ಮಟ್ಟದಲ್ಲಿ ವಿಶೇಷ ಸ್ಥಾನ ಪಡೆದಿವೆ. ಮೂರು ಸಂಸ್ಥೆಗಳು ಇಂದು ಜತೆಗೂಡಿ ದೇಶದ ಪ್ರಗತಿಗೆ ಒಟ್ಟಾಗಿ ಶ್ರಮಿಸುವ ಸಂದೇಶವನ್ನು ದೇಶಕ್ಕೆ ರವಾನಿಸಿದ್ದೀರಿ. ಎಂಎಸ್ಎಂಇಗಳು ಸರ್ಕಾರ ಮಾಡಲಾಗದ ಕೆಲಸವನ್ನು ಮಾಡಿ ಜನರಿಗೆ ಉದ್ಯೋಗ ನೀಡುತ್ತಿವೆ. ಆಮೂಲಕ ನಿಮ್ಮ ಬದುಕಿನ ಜತೆಗೆ ಕೋಟ್ಯಂತರ ಕುಟುಂಬಗಳಿಗೆ ಆಧಾರವಾಗಿದ್ದೀರಿ. ನಿಮಗೆ ಅಗತ್ಯ ನೆರವು ನೀಡುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜವಾಬ್ದಾರಿ” ಎಂದರು.

“ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಬಲಿಷ್ಠವಾದಷ್ಟು ಸರ್ಕಾರಗಳು ಬಲಿಷ್ಠವಾಗುತ್ತವೆ, ನೀವುಗಳು ದುರ್ಬಲವಾದರೆ, ಸರ್ಕಾರವೂ ದುರ್ಬಲವಾಗುತ್ತದೆ. ಇಂದಿನ ದಿನಮಾನದಲ್ಲಿ ನೀವೆಲ್ಲರೂ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಬೇಕಾಗಿದೆ. ಕೆಲವು ತಿಂಗಳ ಹಿಂದೆ ವಿಮಾನದಲ್ಲಿ ಪ್ರಯಾಣ ಮಾಡುವಾಗ ಸಂಸ್ಥೆಯೊಂದರ ಎಂ.ಡಿ ನನಗೆ ಪರಿಚಯವಾದರು. ಅವರು ಕೆ.ಆರ್ ಪುರಂ ನಲ್ಲಿರುವ ಸಣ್ಣ ಕಾರ್ಖಾನೆಗೆ ಭೇಟಿ ನೀಡಲು ಹೋಗುತ್ತಿರುವುದಾಗಿ ತಿಳಿಸಿದರು. ಆ ಕೈಗಾರಿಕೆ ನಡೆಸುತ್ತಿರುವ ಹುಡುಗ ಈ ಮೊದಲು ಇಸ್ರೇಲ್ ನಲ್ಲಿ ಕೆಲಸ ಮಾಡುತ್ತಿದ್ದ, ಈಗ ಇಲ್ಲಿ ಸಣ್ಣ ಕೈಗಾರಿಕೆ ಆರಂಭಿಸಿದ್ದು, ಅದನ್ನು ನೋಡಲು ತನ್ನ ಕಂಪನಿಯವರು ತಿಳಿಸಿರುವುದಾಗಿ ಹೇಳಿದ. ಎರಡು ದಿನಗಳ ನಂತರ ನಾನು ಮತ್ತೆ ದೆಹಲಿಗೆ ಪ್ರಯಾಣ ಮಾಡುವಾಗ ಆ ವ್ಯಕ್ತಿ ಕೂಡ ದೆಹಲಿಗೆ ವಾಪಸ್ಸಾಗುತ್ತಿದ್ದ. ಆಗ ಆತ ಹೇಳಿದ, ಬೆಂಗಳೂರಿನಲ್ಲಿ ಎಂತಹ ಪ್ರತಿಭೆಗಳಿದ್ದಾರೆ ಎಂದು ಆತ ಹೇಳಿದ. ಇಸ್ರೇಲ್ ಕಂಪನಿಯವರು ಯಂತ್ರೋಪಕರಣಗಳ ಬಿಡಿ ಭಾಗಗಳನ್ನು ತಯಾರಿಸುವ ಜವಾಬ್ದಾರಿಯನ್ನು ಈ ಕೈಗಾರಿಕೆಗೆ ನೀಡಿದ್ದಾರೆ ಎಂದು ಆತ ಹೇಳುತ್ತಿದ್ದ” ಎಂದರು.

“ನನ್ನ ಸಹೋದರ ಕನಕಪುರದಲ್ಲಿ ರೇಷ್ಮೆಗೆ ಸಂಬಂಧಿಸಿದಂತೆ ಒಂದು ಸಣ್ಣ ಕೈಗಾರಿಕೆ ಆರಂಭಿಸಿದ್ದು, ಆತ ಚೀನಾ ಕಂಪನಿ ಜತೆ ಒಡಂಬಡಿಕೆ ಮಾಡಿಕೊಂಡಿದ್ದು, ಅವರು ಬಂದು ತಂತ್ರಜ್ಞಾನ ಪೂರೈಕೆ ಮಾಡಬೇಕು. ಆದರೆ ವೀಸಾ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಅವರು ಬಂದು ತರಬೇತಿ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಅದು ಅರ್ಧಕ್ಕೆ ನಿಂತಿದೆ. ಆದರೂ ನನ್ನ ಸಹೋದರ ಏನಾದರೂ ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದಾನೆ. ನಾವು ಬೇರೆಯವರ ಮೇಲಿನ ಅವಲಂಬನೆಯನ್ನು ನಾವು ಕಡಿಮೆ ಮಾಡಿಕೊಳ್ಳಬೇಕು” ಎಂದು ತಿಳಿಸಿದರು.

“ನಿನ್ನೆ ದೇಶದ ಪ್ರತಿಷ್ಠಿತ ಉದ್ದಿಮೆದಾರರನ್ನು ಭೇಟಿ ಮಾಡಿದ್ದೆ. ಯಾವುದೇ ವಸ್ತು ಅಮೆರಿಕದದಲ್ಲಿ ಉತ್ಪಾದನೆ ಮಾಡಿದರೆ ಭಾರತದಲ್ಲಿ ಉತ್ಪಾದನೆ ಮಾಡುವುದಕ್ಕಿಂತ 10 ಪಟ್ಟು ವೆಚ್ಚ ಹೆಚ್ಚಾಗುತ್ತದೆ. ಅದೇರೀತಿ ಚೀನಾದಲ್ಲಿ ಉತ್ಪಾದನೆ ಮಾಡಿದರೆ ನಾಲ್ಕು ಪಟ್ಟು ವೆಚ್ಚ ಏರಿಕೆಯಾಗುತ್ತದೆ ಎಂದು ಅವರು ಹೇಳುತ್ತಿದ್ದರು. ಇದು ಭಾರತೀಯರ ಮುಂದೆ ಇರುವ ದೊಡ್ಡ ಅವಕಾಶ. ನಮ್ಮಲ್ಲಿರುವ ಅವಕಾಶ ಬೇರೆಲ್ಲೂ ಇಲ್ಲ ಎಂದು ವಿಶ್ವದ ಅನೇಕ ರಾಷ್ಟ್ರಗಳಿಗೆ ಮನವರಿಕೆಯಾಗಿದೆ” ಎಂದು ತಿಳಿಸಿದರು.

“ಕೇಂದ್ರ ಸರ್ಕಾರದ ನೀತಿಯಂತೆ ರಾಷ್ಟ್ರೀಕೃತ ಬ್ಯಾಂಕುಗಳ ಸಹಕಾರ ಅಗತ್ಯವಿದೆ. ಆಸಕ್ತಿಯಿಂದ ಪ್ರಾಮಾಣಿಕತೆಯಿಂದ ದುಡಿಯುವವರಿಗೆ ಕೇಂದ್ರ ಹಾಗೂ ರಾಜ್ಯಗಳು ಪ್ರೋತ್ಸಾಹ ನೀಡಿದರೆ ಇಡೀ ದೇಶಕ್ಕೆ ನೆರವಾಗುತ್ತದೆ. ಮೇಕ್ ಇನ್ ಇಂಡಿಯಾ ಚಿಂತನೆಗೆ ಹೆಚ್ಚು ಒತ್ತು ನೀಡಿದಾಗ ನಮ್ಮ ಪ್ರತಿಭೆಗಳು ನಮ್ಮಲ್ಲಿಯೇ ಉಳಿದುಕೊಳ್ಳುತ್ತವೆ. ನಮ್ಮ ರಾಜ್ಯದಲ್ಲಿ 250 ಇಂಜಿನಿಯರಿಂಗ್ ಕಾಲೇಜುಗಳಿವೆ. ಇಲ್ಲಿಂದ ವಿದ್ಯಾಭ್ಯಾಸ ಮಾಡಿದ ಪ್ರತಿಭಾನ್ವಿತರು ಬೇರೆ ದೇಶಕ್ಕೆ ಹೋಗುತ್ತಿದ್ದಾರೆ. ಅವರನ್ನು ಇಲ್ಲಿಯೇ ಬಳಸಿಕೊಳ್ಳಬೇಕು. ನಾವೆಲ್ಲರೂ ಒಟ್ಟಾಗಿ ಸೇರಿ ಮುನ್ನಡೆಯಬೇಕಿದೆ” ಎಂದು ಹೇಳಿದರು.

ಬೆಂಗಳೂರು ಯೋಜಿತ ನಗರವಲ್ಲ. ಆದರೂ ನಾವು ಇದನ್ನು ಪ್ರಗತಿಯತ್ತ ಮುನ್ನಡೆಸುತ್ತಿದ್ದೇವೆ. ನೀವು ಗ್ರಾಮೀಣ ಭಾಗದಲ್ಲಿರುವ ಪ್ರತಿಭೆಗಳಿಗೂ ಆದ್ಯತೆ ನೀಡಬೇಕು. ನಿಮಗಾಗಿ ಪ್ರತ್ಯೇಕ ಸಚಿವಾಲಯ ನಿರ್ಮಿಸುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *