ನವೆಂಬರ್ ಬರಲಿ ಸಿಎಂ ವಿಚಾರದ ಬಗ್ಗೆ ಮಾತನಾಡುತ್ತೇನೆಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಮೈಸೂರಿನಲ್ಲಿ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಬದಲಾವಣೆ ವಿಚಾರವಾಗಿ ಹೀಗೆ ಪ್ರತಿಕ್ರಿಯಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಜನ ಬೆಂಬಲ ಇದೆ. 5 ವರ್ಷವೂ ಇರಬಹುದು, 10 ವರ್ಷವೂ ಇರಬಹುದು. ಮಾಧ್ಯಮಗಳೇ ನವೆಂಬರ್ ಎಂದು ಟೈಮ್ ಫಿಕ್ಸ್ ಮಾಡಿದ್ದೀರ, ಈಗ ಜೂನ್, ನವೆಂಬರ್ ಬರಲಿ ಆವತ್ತು ಮಾತನಾಡುತ್ತೇನೆ ಎಂದು ಹೇಳಿದರು.
ಹೈಕಮಾಂಡ್ ಹಾಗೂ ಶಾಸಕರ ಬೆಂಬಲ ಸಿದ್ದರಾಮಯ್ಯ ಮತ್ತು ಸರ್ಕಾರದ ಮೇಲೆ ಇದೆ. ಯಾವ ವಿಚಾರ ಯಾವಾಗ ತೀರ್ಮಾನ ಮಾಡಬೇಕೆಂಬುದು ಹೈಕಮಾಂಡ್ ಗೆ ಗೊತ್ತಿದೆ. ಹೈಕಮಾಂಡ್ ವಿಚಾರವನ್ನು ನಾನು ಹೇಗೆ ಮಾತನಾಡಲಿ, 5 ವರ್ಷವೂ ಕಾಂಗ್ರೆಸ್ ಸರ್ಕಾರ ಇರುತ್ತದೆ. ಈ ಬಗ್ಗೆ ಹೆಚ್ಚು ಪ್ರಶ್ನೆ ಕೇಳಿ ನನ್ನನ್ನು ಸಿಲುಕಿಸುವ ಕೆಲಸ ಮಾಡಬೇಡಿ. ನೀವು ಪ್ರಶ್ನಿಸಿದ್ದೀರಿ, ನಾನು ಉತ್ತರಿಸಿದ್ದೇನೆ ಎರಡನ್ನೂ ತೋರಿಸಿ, ಪ್ರಶ್ನೆಯೂ ನನ್ನದೇ, ಉತ್ತರವೂ ನನ್ನದೇ ಎಂಬಂತೆ ಬಿಂಬಿಸಬೇಡಿ ಎಂದರು.
ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, ಬಿಜೆಪಿಗೆ ಕಿಕ್ಕೂ ಇಲ್ಲ, ಬ್ಯಾಕೂ ಇಲ್ಲ, ಅವರೇನು ಅದರ ಬಗ್ಗೆ ಮಾತನಾಡುವುದು. ಈ ವಿಚಾರದಲ್ಲಿ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದಾರೆ, ನಾನು ನ್ಯಾಯಲಯದಲ್ಲೇ ಉತ್ತರಿಸುತ್ತೇನೆ ಎಂದು ಉತ್ತರಿಸಿದರು.