ಬಾರ್ಗಳಿಂದ ಮಾಮೂಲಿ ಹಣ ವಸೂಲು ಮಾಡುತ್ತಿದ್ದ ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸ್ ಠಾಣೆಯ ಪಿಎಸ್ಐ ಅರ್ಜುನ್ ಎಂಬವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ಲೋಕಾಯುಕ್ತ ಪೊಲೀಸ್ ದಾಳಿ ನಡೆಸಿ ಠಾಣೆಯ ಸಿಬ್ಬಂದಿ ಹಾಗೂ ಪಿಎಸ್ಐಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ನಂಗಲಿ ಪೊಲೀಸ್ ಠಾಣೆಯ ಪೇದೆ ಸುರೇಶ್ ಸ್ಥಳೀಯ ಬಾರ್ ಮಾಲೀಕರಿಂದ ಪ್ರತಿ ತಿಂಗಳು ನಿಯಮಿತವಾಗಿ ಮಾಮೂಲಿ ಹಣ ವಸೂಲಿ ಮಾಡುತ್ತಿದ್ದಂತೆ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದರು. ಬಾರ್ ಮಾಲೀಕ ಪ್ರಶಾಂತ್ ಎಂಬವರಿಂದ 10,000ರೂ. ಲಂಚ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತಕ್ಕೆ ಸಿಕ್ಕಿ ಬಿದ್ದಿದ್ದಾರೆ.
ಸುರೇಶ್ ನೀಡಿದ ಮಾಹಿತಿಯನ್ವಯ ಠಾನೆಯ ಪಿಎಸ್ಐ ಅರ್ಜುನ್ ಗೌಡ ಅವರ ಸೂಚನೆಯಂತೆ ಹಣ ವಸೂಲಿ ಮಾಡಲಾಗುತ್ತಿತ್ತು. ಲೋಕಾಯುಕ್ತ ಅಧಿಕಾರಿಗಳು ಅರ್ಜುನ್ ಗೌಡ ಅವರನ್ನು ಕೂಡ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ರಾಮನಗರ ಲೋಕಾಯುಕ್ತ ಡಿವೈಎಸ್ಪಿ ಶಿವಪ್ರಸಾದ್ ನೇತೃತ್ವದಲ್ಲಿ ಕೋಲಾರ ಲೋಕಾಯುಕ್ತ ಎಸ್ಪಿ ಧನುಂಜಯ ನಂಗಲಿ ಠಾಣೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.