2028ರವರೆಗೆ ಸಿಎಂ ಕುರ್ಚಿ ಖಾಲಿ ಇಲ್ಲ. ಹಾಗೆಯೇ ಕೆಪಿಸಿಸಿ ಅಧ್ಯಕ್ಷ ಕುರ್ಚಿ ಸಹ ಖಾಲಿ ಇಲ್ಲ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಹೇಳಿದರು.
ಕೊಪ್ಪಳ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2028ರವರೆಗೆ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ. ಇದನ್ನು ದಸರಾ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ. 2028ರ ನಂತರ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂದು ಬಯಸುವವರಲ್ಲಿ ತಾವು ಸಹ ಒಬ್ಬರು ಎಂದು ಹೇಳಿದ್ದಾರೆ.
ಸಿಎಂ ಆಗಬೇಕೆಂಬ ಆಸೆ ಡಿ.ಕೆ.ಶಿವಕುಮಾರ್ ಅವರಿಗೂ ಇರುತ್ತೆ. ಪಕ್ಷ ಅಧಿಕಾರಕ್ಕೆ ಬರಲು ಡಿಕೆಶಿ ಅವರ ಕೊಡುಗೆ ಅಪಾರ. ಮುಂದೆ ಅವರು ಸಹ ಸಿಎಂ ಆಗಲಿ ಎಂಬ ಆಸೆ ತಮ್ಮದು.ವ ಇದೇ ತಿಂಗಳು ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ ಎನ್ನುವುದು ಬಿಜೆಪಿಯವರ ಊಹಾಪೋಹ. ಖಂಡಿತವಾಗಿ ಮುಂದಿನ ಚುನಾವಣೆಯನ್ನು ಡಿಕೆಶಿ ನೇತೃತ್ವದಲ್ಲೇ ಪಕ್ಷ ಎದುರಿಸುತ್ತದೆ ಎಂದು ಹೇಳಿದರು.
ಡಿಸಿಎಂ ಆಗುವ ಬಗ್ಗೆ ನನಗೇನೂ ಆಸೆ ಇಲ್ಲ. ಆದರೆ ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ನಿಭಾಯಿಸಲು ಸದಾ ಸಿದ್ಧ. ತಾವು ಪಕ್ಷದ ಶಿಸ್ತಿನ ಸಿಪಾಯಿ ಎಂದ ಜಮೀರ್. ಪಕ್ಷದ ಕೆಲಸಗಳಿಗಾಗಿ ಸತೀಶ್ ಜಾರಕಿಹೊಳಿ ಆಗಾಗ ದೆಹಲಿ ಹೋಗಿ ಬರುತ್ತಾರೆ ಎಂದು ಹೇಳಿ ಸಿಎಂ ಬದಲಾವಣೆ ಇಲ್ಲ ಎಂದು ಅಭಿಪ್ರಾಯಪಟ್ಟರು.
ನವೆಂಬರ್ನಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ವಿಚಾರವಾಗಿ ಪ್ರತಿಪಕ್ಷ, ಆಡಳಿತ ಪಕ್ಷಗಳ ಮಧ್ಯೆ ಚರ್ಚೆ ತೀವ್ರ ಕಾವು ಪಡೆದುಕೊಂಡಿದ್ದು, ಒಬ್ಬೊಬ್ಬ ಸಚಿವರು ಹೇಳಿಕೆಗಳನ್ನು ಕೊಡುತ್ತಿದ್ದಾರೆ.


