Menu

ಮೆಟ್ರೊ ಟಿಕೆಟ್‌ ದರ ಏರಿಕೆ ಕೇಂದ್ರವೇ ಮಾಡೋದಾದ್ರೆ ಒಪ್ಪಲ್ಲವೆಂದು ಸಿಎಂ ಪತ್ರ ಬರೆಯಲಿ: ಆರ್‌ ಅಶೋಕ

ಮೆಟ್ರೊ ಟಿಕೆಟ್‌ ದರ ಏರಿಕೆಯಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲ. ಒಂದು ವೇಳೆ ಕೇಂದ್ರ ಸರ್ಕಾರದಿಂದ ದರ ಏರಿಕೆ ಆಗುವುದಿದ್ದರೆ, ಮುಂದಿನ 2 ವರ್ಷ ದರ ಏರಿಕೆಯನ್ನು ಒಪ್ಪಲ್ಲ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಮೆಟ್ರೊದಲ್ಲಿ 87% ಪಾಲು ರಾಜ್ಯದ್ದಾಗಿದೆ ಎಂದು ಕಾಂಗ್ರೆಸ್‌ ಸರ್ಕಾರ ಹೇಳಿಕೊಳ್ಳುತ್ತದೆ. ಆದರೆ ಟಿಕೆಟ್‌ ದರ ಏರಿಕೆ ಮಾಡಿದ್ದು ಮಾತ್ರ ಕೇಂದ್ರ ಸರ್ಕಾರವೆಂದು ಆರೋಪಿಸಲಾಗುತ್ತಿದೆ. ಬಿಎಂಆರ್‌ಸಿಎಲ್‌ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ರಾಜ್ಯ ಸರ್ಕಾರದಿಂದಲೇ ನೇಮಿಸಲಾಗಿದೆ. ಸಾವಿರಾರು ಕೋಟಿ ರೂ. ಟೆಂಡರನ್ನು ರಾಜ್ಯ ಸರ್ಕಾರದಿಂದ ಕರೆಯಲಾಗುತ್ತದೆ. ರಾಜ್ಯ ಆರ್ಥಿಕ ಇಲಾಖೆ, ನಗರಾಭಿವೃದ್ಧಿ ಇಲಾಖೆ ಕಾರ್ಯ ದರ್ಶಿಗಳು ಟೆಂಡರ್‌ ಅಂತಿಮಗೊಳಿಸುತ್ತಾರೆ. ಇಷ್ಟೆಲ್ಲ ಅಧಿಕಾರವಿರುವಾಗ, ದರ ಏರಿಕೆಯನ್ನೂ ಇವರೇ ಮಾಡಿದ್ದಾರೆ. ಕೇಂದ್ರ ಸರ್ಕಾರ ಆದೇಶ ಮಾಡಿದರೆ ಎಲ್ಲ ಮೆಟ್ರೊ ನಿಗಮಗಳಲ್ಲೂ ಟಿಕೆಟ್‌ ದರ ಏರಿಕೆಯಾಗಬೇಕಾಗುತ್ತದೆ ಎಂದು ಹೇಳಿದರು.

ಫೇರ್‌ ಫಿಕ್ಸೇಶನ್‌ ಕಮಿಟಿ ಸ್ವತಂತ್ರ ಸಮಿತಿಯಾಗಿದ್ದು, ನಿವೃತ್ತ ನ್ಯಾಯಧೀಶರು, ರಾಜ್ಯ ಸರ್ಕಾರ ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರ ಸರ್ಕಾರದ ಒಬ್ಬ ಪ್ರತಿನಿಧಿ ಇರುತ್ತಾರೆ. ಈ ಸಮಿತಿ ದರ ಏರಿಕೆ ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುವು ದಿಲ್ಲ. ಕಳೆದ ವರ್ಷ ಇದೇ ಸಮಿತಿ 100% ದರ ಏರಿಕೆಗೆ ಶಿಫಾರಸು ಮಾಡಿತ್ತು. ಜೊತೆಗೆ ಪ್ರತಿ ವರ್ಷ 5% ಹೆಚ್ಚು ಮಾಡಬಹುದೆಂದು ಹೇಳಿದೆ. ಈ ಸಮಿತಿ ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ರವಿಶಂಕರ್‌ಗೆ ಶಿಫಾರಸು ನೀಡಿದೆ. ಅಧಿಕಾರಿ ರವಿಶಂಕರ್‌ ದರ ಏರಿಕೆಗೆ ಮುನ್ನ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಲ್ಲ. ದರ ಏರಿಕೆಯ ನಿರ್ಧಾರವನ್ನು ಈ ಅಧಿಕಾರಿ ಹಾಗೂ ಸರ್ಕಾರವೇ ಮಾಡಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರವೇ ಇಲ್ಲ ಎಂದು ಸಮರ್ಥಿಸಿಕೊಂಡರು.

ಒಂದು ವೇಳೆ ಕೇಂದ್ರ ಸರ್ಕಾರವೇ ದರ ಏರಿಕೆ ಮಾಡಿದ್ದರೆ, ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮುಂದಿನ ಎರಡು ವರ್ಷ ದರ ಏರಿಕೆಗೆ ನಾವು ವಿರೋಧಿವಿದ್ದೇವೆ ಎಂದು ತಿಳಿಸಲಿ. ಇದನ್ನು ಮಾಡುವುದು ಬಿಟ್ಟು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಬೇಕಿಲ್ಲ. 2025 ರ ಫೆಬ್ರವರಿಯಲ್ಲಿ ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದು, ದರ ಇಳಿಕೆಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದರು. ಹಾಗಾದರೆ ರಾಜ್ಯ ಸರ್ಕಾರಕ್ಕೆ ಈ ಅಧಿಕಾರ ಹೇಗೆ ಬಂದಿದೆ? ಸರ್ಕಾರ ಪಾಪರ್‌ ಆಗಿ ರುವುದರಿಂದ ಟಿಕೆಟ್‌ ದರ ಏರಿಸಲಾಗಿದೆ ಎಂದರು.

ಕೇಂದ್ರ ಸರ್ಕಾರಕ್ಕೆ ದರ ಏರಿಕೆಯ ಅಧಿಕಾರ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳುವುದಾದರೆ, ಇನ್ನು ಮುಂದೆ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸುವ ಅಧಿಕಾರವನ್ನು ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ‌ ನೀಡಬೇಕು. ಟೆಂಡರ್‌ಗಳನ್ನು ಕರೆಯುವ ಹಾಗೂ ವರ್ಗಾವಣೆಯ ಅಧಿಕಾರವನ್ನು ಕೇಂದ್ರಕ್ಕೆ ನೀಡಬೇಕು. ನಾನು ಕೇಂದ್ರದ ಸಚಿವರೊಂದಿಗೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಟಿಕೆಟ್‌ ದರ ಏರಿಕೆಯಿಂದ ತೊಂದರೆಯಾಗುತ್ತದೆ ಹಾಗೂ ಇದನ್ನು ತನಿಖೆ ಮಾಡಿ ಎಂದು ಹೇಳಿದ್ದೇನೆ. ಕೇಂದ್ರ ಸರ್ಕಾರ ಜನರ ಪರವಾಗಿ ಧ್ವನಿ ಎತ್ತಿ ದರ ಏರಿಕೆಯನ್ನು ತಡೆಹಿಡಿದಿದೆ ಎಂದು ಹೇಳಿದರು.

ಪ್ರಧಾನಿ ಕರೆದ ಒಂದು ಸಭೆಗೂ ರಾಜ್ಯ ಸರ್ಕಾರದಿಂದ ಯಾರೂ ಹೋಗಿಲ್ಲ. ಜಿಎಸ್‌ಟಿಯಲ್ಲಿ ರಾಜ್ಯಕ್ಕೆ ಎಷ್ಟು ಹಣ ಬಂದಿದೆ, ರೈಲ್ವೆ, ಹೆದ್ದಾರಿ, ಇಂಧನ, ಗ್ರಾಮೀಣಾಭಿವೃದ್ಧಿ, ಕೃಷಿ  ಕ್ಷೇತ್ರಗಳಲ್ಲಿ ಎಷ್ಟು ಹಣ ಬಂದಿದೆ ಎಂದು ಶ್ವೇತಪತ್ರ ಹೊರಡಿಸಲಿ. ರೈಲು ಯೋಜನೆಗಳಲ್ಲಿ ಭೂ ಸ್ವಾಧೀನ ಮಾಡಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲದೆ, ಯೋಜನೆಗಳು ಮುಂದುವರಿಯುತ್ತಿಲ್ಲ. ಈ ಹಿಂದೆ ಮನಮೋಹನ್‌ ಸಿಂಗ್‌ ಅವಧಿಯಲ್ಲಿ ಎಷ್ಟು ಹಣ ಬಂದಿದೆ ಎಂದು ಕೂಡ ತಿಳಿಸಲಿ. ಈ ಬಗ್ಗೆ ನಾನು ಹತ್ತು ಬಾರಿ ಕೇಳಿದ್ದರೂ ಮಾಹಿತಿ ನೀಡಿಲ್ಲ ಎಂದು ತಿಳಿಸಿದರು.

ಈಗಾಗಲೇ ರಾಜ್ಯದ ಸಾಲ 2 ಲಕ್ಷ ಕೋಟಿ ರೂ. ದಾಟಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 2-3 ಸಾವಿರ ರೇಷನ್‌ ಕಾರ್ಡ್‌ಗಳು ರದ್ದಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಜಿಎಸ್‌ಟಿ ವಿಧಿಸಿ ಸೌಲಭ್ಯಗಳನ್ನು ಕಿತ್ತುಕೊಳ್ಳಲಾಗಿದೆ. ಮುಂದೆ ಇನ್ನಷ್ಟು ಯೋಜನೆ ಗಳು ಕಡಿತಗೊಳ್ಳಲಿವೆ ಎಂದರು.ಪ್ರಧಾನಿ ನರೇಂದ್ರ ಮೋದಿ ಬಲಿಷ್ಠ ನಾಯಕರಾಗಿರುವುದರಿಂದ ಕಾಂಗ್ರೆಸ್‌ಗೆ ಭಯವಾಗಿದೆ. ಅಮೆರಿಕ ಜೊತೆಗಿನ ಸ್ನೇಹದಿಂದಲೂ ಕಾಂಗ್ರೆಸ್‌ ನಾಯಕರಿಗೆ ಹೆದರಿಕೆಯಾಗಿದೆ. ಇಲ್ಲಿ ಪೋಸ್ಟರ್‌ ಅಂಟಿಸುವ ಬದಲು ದೆಹಲಿಯಲ್ಲಿ ಅಂಟಿಸಲಿ ಎಂದು ಹೇಳಿದರು.

ಸಿಎಂ ಕುರ್ಚಿ ಕಿತ್ತಾಟದ ನಡುವೆ ಆಡಳಿತ ಗೊಂದಲದ ಗೂಡಾಗಿದೆ. ಕಾಂಗ್ರೆಸ್‌ ಹೈಕಮಾಂಡ್‌ ದುರ್ಬಲವಾಗಿದ್ದು, ಇತ್ತ ಕಡೆ ಯಾರೂ ನೋಡುತ್ತಿಲ್ಲ. ನಿಗಮಗಳ ಅಧ್ಯಕ್ಷರಿಗೆ ಸಚಿವ ಸಂಪುಟ ಸ್ಥಾನಮಾನ ನೀಡುವ ಮೂಲಕ ಪ್ರತಿ ವರ್ಷ 40-50 ಕೋಟಿ ರೂ. ದುರ್ಬಳಕೆಯಾಗುತ್ತದೆ. ಗೃಹಲಕ್ಷ್ಮಿಯ ಎರಡು ತಿಂಗಳ, ಅನ್ನಭಾಗ್ಯದ ಒಂದು ತಿಂಗಳ ಹಣ ನೀಡಿಲ್ಲ. ಆದರೆ ಕಾಂಗ್ರೆಸ್‌ ಪಕ್ಷದ ಮೋಜು ಮಸ್ತಿಗೆ ಹಣ ನೀಡಲಾಗುತ್ತಿದೆ. ಕೂಡಲೇ ಈ ಆದೇಶ ರದ್ದು ಮಾಡಬೇಕು ಎಂದು ಆಗ್ರಹಿಸಿದರು.

Related Posts

Leave a Reply

Your email address will not be published. Required fields are marked *