ಬೆಂಗಳೂರು: 18 ವರ್ಷಗಳ ಬಳಿಕ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್ಸಿಬಿ ತಂಡದ ಆಟಗಾರರಿಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಆಡಳಿತ ಸೌಧ ವಿಧಾನಸೌಧದ ಮುಂಭಾಗದಲ್ಲಿ ಸನ್ಮಾನಿಸಿದರು.
ವಿಧಾನಸೌಧ ಭವ್ಯ ಮೆಟ್ಟಿಲುಗಳ ಬಳಿ ಆರ್ ಸಿಬಿ ಆಟಗಾರರಿಗೆ ಸಿಎಂ ಸಿದ್ದರಾಮಯ್ಯ ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದರು. ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಚಿವ ಜಮೀರ್ ಅಹ್ಮದ್ ಸೇರಿ ಹಾಲಿ ಸಚಿವರು, ಶಾಸಕರು ಹಾಗೂ ಅವರ ಮಕ್ಕಳು ಉಪಸ್ಥಿತರಿದ್ದರು.
ಅಹಮದಾಬಾದ್ ನಲ್ಲಿ ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ 6 ರನ್ ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ ಆರ್ ಸಿಬಿ ಆಟಗಾರರು ಬುಧವಾರ ಸಂಜೆ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದರು.
ಬೆಂಗಳೂರಿಗೆ ಬಂದಿಳಿದ ನಂತರ ನಗರದ ಖಾಸಗಿ ಹೋಟೆಲ್ ನಲ್ಲಿ ವಿಶ್ರಾಂತಿ ಪಡೆದ ನಂತರ ವಿಧಾನಸೌಧಕ್ಕೆ ಟ್ರೋಫಿಯೊಂದಿಗೆ ಆಗಮಿಸಿದ ಆಟಗಾರರನ್ನು ಡಿಸಿಎಂ ಡಿಕೆ ಶಿವಕುಮಾರ್ ಕನ್ನಡ ಧ್ವಜ ನೀಡಿ ಬರಮಾಡಿಕೊಂಡರು.
ಅಭಿಮಾನಿಗಳ ಜಯಘೋಷ ಹಾಗೂ ಪೊಲೀಸ್ ಬ್ಯಾಂಡ್ ಮೂಲಕ ಬರಮಾಡಿಕೊಂಡರು. ಬಳಿಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಆಟಗಾರರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸ್ಮರಣೀಕೆ ನೀಡಿ ಸನ್ಮಾನಿಸಿದರು.
ಈ ವೇಳೆ ವರುಣಾಗಮನವಾಗಿದ್ದರಿಂದ ಮಳೆಯಲ್ಲೇ ಆರ್ಸಿಬಿ ಆಟಗಾರರನ್ನು ಸನ್ಮಾನಿಸಲಾಯಿತು. ಮಳೆ ಜೋರಾಗುತ್ತಿದ್ದಂತೆ ಆಟಗಾರರು ವೇದಿಕೆಯಿಂದ ತೆರಳಿದರು.
ವಿರಾಟ್ ಕೊಹ್ಲ, ರಜತ್ ಪಾಟೀದಾರ್, ಟಿಮ್ ಡೇವಿಡ್, ದಿನೇಶ್ ಕಾರ್ತಿಕ್ ಸೇರಿ ಆರ್ಸಿಬಿ ಆಟಗಾರರು ಫ್ಯಾನ್ಸ್ ನೋಡಿ, ಸಂತಸ ವ್ಯಕ್ತಪಡಿಸಿದರು. ಅಭಿಮಾನಿಗಳ ಸಾಗರವನ್ನು ಕಂಡು ತಮ್ಮ ಮೊಬೈಲ್ಗಳಲ್ಲಿ ವೀಡಿಯೋ ಮಾಡಿಕೊಂಡರು.