Menu

ನೀರಿನ ವಿಚಾರಕ್ಕೆ ಸಮುದಾಯಗಳ ಮಧ್ಯೆ ಗಲಾಟೆ: ಗದಗಲ್ಲಿ 21 ಮಂದಿಯ ಬಂಧನ

ಗದಗ ಮುಂಡರಗಿ ತಾಲೂಕಿನ ಚಿಕ್ಕ ವಡ್ಡಟ್ಟಿ ಗ್ರಾಮದಲ್ಲಿ ಎರಡು ಸಮುದಾಯಗಳ ನಡುವೆ ನೀರಿನ ವಿಚಾರಕ್ಕೆ ನಡೆದ ಗಲಾಟೆಗೆ ಸಂಬಂಧಿಸಿದಂತೆ 21 ಮಂದಿಯನ್ನು ಬಂಧಿಸಲಾಗಿದೆ. ಎಸ್‌ಟಿ ಸಮುದಾಯದ ರೈತನ ಜಮೀನಿನಲ್ಲಿ ಎಸ್‌ಸಿ ವ್ಯಕ್ತಿ ನೀರಿನ ಬಳಕೆ ಮಾಡಿದ ವಿಚಾರಕ್ಕೆ ಗಲಾಟೆ ನಡೆದಿತ್ತು. ಎರಡು ಗುಂಪಿನ 21 ಜನರನ್ನು ಬಂಧಿಸಿರುವುದಾಗಿ ಎಸ್ಪಿ ರೋಹನ್ ಜಗದೀಶ್ ಹೇಳಿದ್ದಾರೆ.

ಎಸ್‌ಟಿ ರೈತನ ಜಮೀನಿನಲ್ಲಿ ನೀರಿನ ಹೊಂಡ ಇದೆ. ಅದರಲ್ಲಿ ಎಸ್‌ಸಿ ಯುವಕರು ಈಜಲು ಹೋಗಿದ್ದರು. ಬೇಸಿಗೆಯಲ್ಲಿ ನೀರು ಹಾಳು ಮಾಡಬೇಡಿ. ಜನ ಜಾನುವಾರುಗಳಿಗೆ ನೀರಿಲ್ಲ ಎಂದು ಅದಕ್ಕೆ ಎಸ್‌ಟಿ ರೈತ ವಿರೋಧ ವ್ಯಕ್ತಪಡಿಸಿದ್ದರು. ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಎರಡು ಗುಂಪಿನ 32 ಜನರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಕೆಲವರನ್ನು ಮುಂಡರಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರೆ, ಇತರ ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ತಿಂಗಳು ಶಿವರಾತ್ರಿ ಹಬ್ಬದ ಸಂದರ್ಭದಲ್ಲೂ ಗಲಾಟೆ ಆಗಿ ಹಿರಿಯರ ಸಮ್ಮುಖ ಮಾತುಕತೆ ನಡೆದು ಸರಿ ಹೋಗಿತ್ತು. ಮತ್ತೆ ಹೊಡೆದಾಡಿಕೊಂಡಿದ್ದಾರೆ. ಚಿಕ್ಕ ವಡ್ಡಟ್ಟಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳದಲ್ಲಿ ಪೊಲೀಸರು ನಿಯೋಜನೆ ಮಾಡಿ ಪರಿಸ್ಥಿತಿ ನಿಯಂತ್ರಿಸಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಹಿಸಲಾಗಿದೆ ಎಂದು ಎಸ್ಪಿ ರೋಹನ್ ಜಗದೀಶ್ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *