ಧರ್ಮಸ್ಥಳದ ನೂರಾರು ಶವಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ನೀಡಿದ ಆರೋಪದಡಿ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ ಶಿವಮೊಗ್ಗದ ಸೋಗಾನೆ ಬಳಿ ಇರುವ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.
ಸೆಪ್ಟೆಂಬರ್ 9 ರಂದು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಬೆಳ್ತಂಗಡಿ ಜೆಎಂಎಫ್ಸಿ ಕೋರ್ಟ್ ಅದೇಶದ ಹಿನ್ನಲೆ ಶಿಫ್ಟ್ ಆಗಿದ್ದ ಚಿನ್ನಯ್ಯ ಕಾರಾಗೃಹದ ಕಾವೇರಿ ಬ್ಯಾರಕ್ನಲ್ಲಿದ್ದರು. ನವೆಂಬರ್ 24 ರಂದು ಬೆಳ್ತಂಗಡಿ ನ್ಯಾಯಾಲಯ 12 ಷರತ್ತು ವಿಧಿಸಿ ಒಂದು ಲಕ್ಷ ಬಾಂಡ್ ಇಬ್ಬರು ಸ್ಥಳೀರು ಶ್ಯೂರಿಟಿ ಪಡೆಯಬೇಕು ಎಂದು ಜಾಮೀನು ಮಂಜೂರು ಮಾಡಿತ್ತು. ಜಾಮೀನು ಮಂಜೂರಾಗಿ 24 ದಿನ ಕಳೆದರೂ ಶ್ಯೂರಿಟಿ ನೀಡಲು ಯಾರು ಮುಂದೆ ಬಾರದ ಕಾರಣ ಚಿನ್ನಯ್ಯ ಬಿಡುಗಡೆಯಾಗಿರಲಿಲ್ಲ.
ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಕಾರಿನಲ್ಲಿ ಚಿನ್ನಯ್ಯನ ಪತ್ನಿ ಮಲ್ಲಿಕಾ ಸೇರಿದಂತೆ ಐದು ಜನರು ಆಗಮಿಸಿದ್ದರು, ಕ್ಯಾಮೆರಾಗಳನ್ನು ನೋಡುತ್ತಿದ್ದಂತೆ ಚಿನ್ನಯ್ಯನ ಪತ್ನಿ ತಲೆಮೇಲೆ ಸೆರಗು ಮುಚ್ಚಿಕೊಂಡು ಜೈಲಿನೊಳಗೆ ಹೋಗಿ ಬಿಡುಗಡೆ ಪ್ರಕ್ರಿಯೆಗಳನ್ನು ಮುಗಿಸಿ ಚಿನ್ನಯ್ಯನನ್ನು ಕರೆದುಕೊಂಡು ಹೋಗಿದ್ದಾರೆ. ಕಾರಾಗೃಹದಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ಬಿಡುಗಡೆ ಪ್ರಕ್ರಿಯೆ ನಡೆಯಿತು. ಜಾಮೀನು ಮಂಜೂರಾಗಿ 24 ದಿನಗಳ ಬಳಿಕ ಚಿನ್ನಯ್ಯ ಬಿಡುಗಡೆಯಾಗಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂದು ಚಿನ್ನಯ್ಯ ದೂರು ನೀಡಿದ್ದು, ಎಸ್ಐಟಿ ತನಿಖೆ ವೇಳೆ ನೀಡಿದ ಮಾಹಿತಿ ಸುಳ್ಳೆಂದು ತಿಳಿದು ಬಂದಿದೆ.ಅವರು ಹೇಳಿದ ಸ್ಥಳದಲ್ಲಿ ಎರಡು ಅಸ್ಥಿಪಂಜರಗಳು ಪತ್ತೆಯಾಗಿದ್ದವು.
ತನಿಖಾ ತಂಡದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಆಗಸ್ಟ್ 23ರಂದು ಚಿನ್ನಯ್ಯ ಅವರನ್ನು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅವರು ಮಂಡ್ಯ ತಾಲೂಕಿನ ಚಿಕ್ಕಬಳ್ಳಿ ನಿವಾಸಿ.


