ಕಾವೇರಿ ನೀರು ಸರಬರಾಜು ಯೋಜನೆಯ ಹಂತ 1 ರಿಂದ ಹಂತ 5 ರವರೆಗಿನ ಎಲ್ಲಾ ಜಲರೇಚಕ ಯಂತ್ರಗಾರಗಳನ್ನು ಜೂನ್ 19ರಿಂದ ಜೂನ್ 20ರವರೆಗೆ ಸ್ಥಗಿತಗೊಳಿಸಲಾಗುತ್ತಿದೆ. ಈ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯ ನಗರ ಪ್ರದೇಶಗಳಲ್ಲಿ ಕಾವೇರಿ ನೀರಿನ ಪೂರೈಕೆ ಸಂಪೂರ್ಣ ಬಂದ್ ಆಗಲಿದೆ. ಮುಂಜಾಗ್ರತಾ ಕ್ರಮವಾಗಿ ನೀರನ್ನು ಶೇಖರಿಸಿಡುವಂತೆ ಬಿಡಬ್ಲ್ಯುಎಸ್ಎಸ್ಬಿ ಸಾರ್ವಜನಿಕರಿಗೆ ಸೂಚಿಸಿದೆ.
ಟಿ.ಕೆ. ಹಳ್ಳಿಯಲ್ಲಿ ಕಾವೇರಿ 5ನೇ ಹಂತದ ಕಾಮಗಾರಿ ನಡೆಯುತ್ತಿದೆ. ಈ ಯೋಜನೆಯಡಿ ಹೊಸ 3000 ಮಿ.ಮೀ. ವ್ಯಾಸದ ಕೊಳವೆ ಮಾರ್ಗವನ್ನು ಜೋಡಿಸಲಾಗುತ್ತಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಸೂಚಿಸಿರುವ ವಿದ್ಯುತ್ ಸ್ಥಾವರಗಳ ವಾರ್ಷಿಕ ನಿರ್ವಹಣೆ ಮತ್ತು ತುರ್ತು ತಾಂತ್ರಿಕ ತಪಾಸಣೆಯನ್ನೂ ಕೈಗೊಳ್ಳಲಾಗುತ್ತಿದೆ. ಈ ಎರಡೂ ಕಾರ್ಯಗಳಿಗಾಗಿ ಜಲರೇಚಕ ಕೇಂದ್ರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ.
ಎರಡು ದಿನ ಕಾವೇರಿ ನೀರಿನ ಸರಬರಾಜು ಸಂಪೂರ್ಣವಾಗಿ ನಿರ್ಬಂಧಿತವಾಗಿರುವುದರಿಂದ, ವಾಣಿಜ್ಯ ಮಳಿಗೆಗಳು, ರೆಸ್ಟೋರೆಂಟ್ಗಳು, ಆಸ್ಪತ್ರೆಗಳು, ಶಾಲೆ-ಕಾಲೇಜುಗಳು ಮತ್ತು ಕೈಗಾರಿಕೆಗಳಿಗೆ ನೀರಿನ ಸಮಸ್ಯೆ ಎದುರಾಗಬಹುದು. ಎಲ್ಲಾ ಸಂಸ್ಥೆಗಳು,ನಾಗರಿಕರು ಕುಡಿಯುವ ನೀರು, ಅಡುಗೆ, ಸ್ನಾನ ಮತ್ತು ಇತರ ಅಗತ್ಯಗಳಿಗಾಗಿ ಸಾಕಷ್ಟು ನೀರನ್ನು ಸಂಗ್ರಹಿಸಿಕೊಳ್ಳುವುದು ಅತ್ಯಗತ್ಯ ತುರ್ತು ಸಂದರ್ಭಗಳಲ್ಲಿ ಬಿಡಬ್ಲ್ಯುಎಸ್ಎಸ್ಬಿನ ಸಹಾಯವಾಣಿಗೆ ಸಂಪರ್ಕಿಸಲು ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ.