ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ ವರದಿ-2015) ವರದಿಯು ನಾಳೆ (ಶುಕ್ರವಾರ) ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದ್ದು, ದತ್ತಾಂಶಗಳ ಅಧ್ಯಯನ ವರದಿ ಪರಿಶೀಲನೆ ಬಳಿಕ ಅನುಷ್ಠಾನ ಕುರಿತು ಸಚಿವ ಸಂಪುಟ ಸಭೆ ತೀರ್ಮಾನ ಮಾಡಲಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 169 ಕೋಟಿ ರೂ. ವೆಚ್ಚದಲ್ಲಿ ಸಿದ್ಧಪಡಿಸಿರುವ ವರದಿಯನ್ನು ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿದ್ದು, ವರದಿಯಲ್ಲಿನ ಅಂಶಗಳ ಬಗ್ಗೆ, ದತ್ತಾಂಶಗಳನ್ನು ಅಧ್ಯಯನ ನಡೆಸಲು ಪ್ರತ್ಯೇಕ ಸಮಿತಿ ರಚಿಸಬೇಕೇ ಅಥವಾ ನೇರವಾಗಿ ಅನುಷ್ಠಾನ ಮಾಡಬೇಕೇ ಎಂಬ ಕುರಿತು ಸದಸ್ಯರೊಂದಿಗೆ ಚರ್ಚಿಸಲಿದ್ದಾರೆ.
ವಿಧಾನಮಂಡಲ ಅಧಿವೇಶನ ಇಲ್ಲ. ಆಯೋಗದ ವರದಿಯಾಗಿರುವುದರಿಂದ ಸದನದಲ್ಲಿ ಮಂಡಿಸುವ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದರೆ ಸಚಿವ ಸಂಪುಟ ಸಭೆಯಲ್ಲೇ ಅನುಷ್ಠಾನದ ಅಂತಿಮ ತೀರ್ಮಾನ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದಿಂದ ವರದಿ ಅನುಷ್ಠಾನ ಕ್ಕೆ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಯಾವ ನಡೆ ಅನುಸರಿಸಲಿದೆ ಎಂಬುದು ಕೂಡ ಕುತೂಹಲ ಹುಟ್ಟಿಸಿದೆ.
ಈ ನಡುವೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶೇ.50ರ ಮೀಸಲಾತಿ ಮಿತಿಯನ್ನು ರದ್ದುಗೊಳಿಸಿ ಜಾತಿ ಜನಗಣತಿ ಬಗ್ಗೆ ಹೊಸ ಕಾನೂನು ತರುತ್ತೇವೆ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಜಾತಿ ಜನಗಣತಿ ಬಗ್ಗೆ ಹೊಸ ಕಾನೂನು ತರುವ ಎಲ್ಲಾ ಜಾತಿ ಧರ್ಮಗಳ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಜಾತಿಗಣತಿ ಮಾಡಬೇಕು,ಇದರಿಂದ ಯಾವ ಜನಾಂಗ ದವರು ಎಷ್ಟಿದ್ದಾರೆಂದು ತಿಳಿಯುತ್ತದೆ. ಜಾತಿಗಣತಿಯಿಂದ ಸಮುದಾಯದ ಜನಸಂಖ್ಯೆ ಎಷ್ಟಿದೆ ಗೊತ್ತಾಗಲಿದೆ. ಆದಿವಾಸಿಗಳು, ಅಲ್ಪಸಂಖ್ಯಾತರು ಎಷ್ಟು ಸಂಖ್ಯೆ ಯಲ್ಲಿದ್ದಾರೆ ಎನ್ನುವುದನ್ನು ತಿಳಿಯಬೇಕಿದೆ ಎಂದು ಹೇಳಿದ್ದಾರೆ.