Menu

ರಾಜ್ಯದಲ್ಲಿ ಜಾತಿ ಗಣತಿ ಮರು ಸಮೀಕ್ಷೆ: ಸಿಎಂ, ಡಿಸಿಎಂ ಘೋಷಣೆ

siddaramiah- dks

ನವದೆಹಲಿ: ರಾಜ್ಯದಲ್ಲಿ ಗೊಂದಲಕ್ಕೆ ಕಾರಣವಾಗಿರುವ ಜಾತಿ ಗಣತಿಯ ಮರು ಸಮೀಕ್ಷೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ.

ದೆಹಲಿಯಲ್ಲಿ ಮಂಗಳವಾರ ಹೈಕಮಾಂಡ್ ಮುಖಂಡರ ಜೊತೆ ಸುದೀರ್ಘ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ಪ್ರಕಟಿಸಿದರು.

ಮುಖ್ಯವಾಗಿ ಹೈಕಮಾಂಡ್ ಜೊತೆ ಜಾತಿ ಜನಗಣತಿ  ಬಗ್ಗೆ ಚರ್ಚೆ ನಡೆದಿದೆ. ಜಾತಿ ಜನಗಣತಿ ವರದಿ 10 ವರ್ಷದ ಹಳೆಯದಾಗಿರುವ ಕಾರಣ ನಿರ್ಧಿಷ್ಟ ಕಾಲ ಮಿತಿಯಲ್ಲಿ ಮರು ಸರ್ವೇ ಮಾಡಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಇನ್ನು ಜಾತಿ ಜನಗಣತಿ ಮರು ಸರ್ವೇ ಮಾಡುವ ಬಗ್ಗೆಯೂ ಸಹ ಸ್ವತಃ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ರಾಜ್ಯ ಬೆಳವಣಿಗೆ ಬಗ್ಗೆ ರಾಹುಲ್ ಗಾಂಧಿ ಚರ್ಚೆ ಮಾಡಿದರು. ಮುಖ್ಯವಾಗಿ ಜಾತಿಗಣತಿ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದರು. ಕೆಲವರು ವರದಿಗೆ ಅಪಸ್ವರ ಎತ್ತಿರುವ ಬಗ್ಗೆ ಚರ್ಚೆ ಆಯಿತು. ಜಾತಿಗಣತಿ ಸಮೀಕ್ಷೆ ಮಾಡಿ 9 ರಿಂದ 10 ವರ್ಷ ಆಗಿದೆ. ಹಾಗಾಗಿ ಮತ್ತೊಮ್ಮೆ ಸಮೀಕ್ಷೆ ಮಾಡಲು ಹೇಳಿದ್ದಾರೆ. ಮತ್ತೊಮ್ಮೆ ಜಾತಿಗಣತಿ ಸಮೀಕ್ಷೆಗೆ ನಾವು ಒಪ್ಪಿಗೆ ನೀಡಿದ್ದೇವೆ. 90 ದಿನದೊಳಗೆ ಜಾತಿಗಣತಿ ಸಮೀಕ್ಷೆ ಮುಗಿಯಲಿದೆ ಎಂದು ಸ್ಪಷ್ಟಪಡಿಸಿದರು.

ಕಾಲ್ತುಳಿತ ದುರಂತ ಪ್ರಕರಣದ ಬಗ್ಗೆಯೂ ಸಭೆಯಲ್ಲಿ ಚರ್ಚೆ ಆಗಿದ್ದು, ಕೈಗೊಂಡಿರುವ ಕ್ರಮದ ಬಗ್ಗೆ ವಿವರಣೆ ನೀಡಿದ್ದೇವೆ. ಸಿಐಡಿ, ನ್ಯಾ.ಕುನ್ಹಾ ನೇತೃತ್ವದ ತನಿಖೆ ಬಗ್ಗೆ ಮಾಹಿತಿ ನೀಡಿದ್ದೇವೆ. ಪೊಲೀಸ್ ಅಧಿಕಾರಿಗಳ ಅಮಾನತು, ಇಂಟಲಿಜೆನ್ಸ್‌ ಮುಖ್ಯಸ್ಥರ ವರ್ಗಾವಣೆ ಈ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡಲಾಗಿದೆ ಎಂದರು.

11 ಜನರು ಸಾಯಬಾರದಿತ್ತು. ಆ ಘಟನೆಯಿಂದ ನೋವಾಗಿದೆ. ಸಮರ್ಥನೆಗೆ ಕುಂಭಮೇಳದ ಘಟನೆಯನ್ನು ತೆಗೆದುಕೊಳ್ಳುವುದಿಲ್ಲ. ರಾಜ್ಯದಲ್ಲಿ ನಡೆದ ಘಟನೆಯಿಂದ ನೋವಾಗಿದೆ. ತನಿಖೆಯ ವರದಿ ಬಂದ ಬಳಿಕ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಮತ್ತೆ ಜಾತಿಗಣತಿ ಸಮೀಕ್ಷೆ ಮಾಡಲು ತೀರ್ಮಾನ ಎಂದ ಡಿಕೆಶಿ

ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ವರಿಷ್ಠರು ನನ್ನ ಹಾಗೂ ಸಿಎಂರನ್ನು ದೆಹಲಿಗೆ ಬರಲು ಹೇಳಿದ್ದರು. ಜೂ.12ರಂದು ಜಾತಿಗಣತಿ ತೀರ್ಮಾನ ಮಾಡಲು ನಿಗದಿ ಆಗಿತ್ತು. ಜಾತಿಗಣತಿ ಬಗ್ಗೆ ಚರ್ಚಿಸಲು ವಿಶೇಷ ಸಂಪುಟ ಕರೆಯಲಾಗಿತ್ತು.ಜಾತಿಗಣತಿ ಬಗ್ಗೆ ಅನೇಕ ಮಠಾಧೀಶರು ವರಿಷ್ಠರನ್ನು ಭೇಟಿಯಾಗಿದ್ದರು. ಅಂಕಿ ಸಂಖ್ಯೆಯ ‌ಬಗ್ಗೆ ಆಕ್ಷೇಪ ಇದೆ ಅಂತಾ ಕೆಲವರು ಹೇಳಿದ್ದರು. ಅಪಸ್ವರ ಬರಬಾರದೆಂಬ ಉದ್ದೇಶದಿಂದ ಮತ್ತೆ ಜಾತಿಗಣತಿಗೆ ಸಲಹೆ ನೀಡಿದ್ದಾರೆ. ಹಾಗಾಗಿ ಮತ್ತೆ ಜಾತಿಗಣತಿ ಸಮೀಕ್ಷೆ ಮಾಡಲು ತೀರ್ಮಾನಿಸಿದ್ದೇವೆ. ಹೊಸದಾಗಿ ನಡೆಯುವ ಜಾತಿಗಣತಿಗೆ ಎಲ್ಲರೂ ಸಹಕಾರ ನೀಡಿ. ನಮ್ಮ ಸರ್ಕಾರದ ಬಗ್ಗೆ ಯಾರಿಗೂ ಆತಂಕ ಬೇಡ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮೀಕ್ಷೆ ಮಾಡಲಿದ್ದೇವೆ. ಯಾವಾಗ ಸಮೀಕ್ಷೆ ಎಂದು ಸಂಪುಟ ಸಭೆ ಮಾಡಿ ಸಿಎಂ ತಿಳಿಸುತ್ತಾರೆ. ಆನ್​​ಲೈನ್​ ಮೂಲಕವೂ ಮಾಹಿತಿ ನೀಡಲು ಅವಕಾಶ ನೀಡುತ್ತೇವೆ. ಅಪಸ್ವರ ಕೇಳಿ ಬಂದಿರುವುದಿಂದ ಮತ್ತೆ ಸಮೀಕ್ಷೆಮಾಡುತ್ತಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ ಹೈಕಮಾಂಡ್ ನಾಯಕರ ಸಭೆ ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು ಮಾತನಾಡಿ, ಇಂದಿನ ಸಭೆಯಲ್ಲಿ ಜಾತಿ ಜನಗಣತಿಯ ಬಗ್ಗೆ ಚರ್ಚೆ ಮಾಡಿದ್ದೇವೆ. ಜೂನ್ 12ನೇ ತಾರೀಖಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ. ನಿರ್ಧಿಷ್ಟ ಕಾಲ ಮಿತಿಯಲ್ಲಿ ಮರು ಸರ್ವೇ ನಡೆಸಲಾಗುವುದು ಎಂದಿರುವ ಕಾಂಗ್ರೆಸ್ ನಾಯಕರು 60, 80, 90 ದಿನಗಳ ಕಾಲ‌ ಮಿತಿಯಲ್ಲಿ ವರದಿ ತರಲು ತೀರ್ಮಾನಿಸಿದ್ದಾರೆ.

ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಜಾತಿ ಗಣತಿ ವರದಿಯು ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಕಾಂಗ್ರೆಸ್​ ಶಾಸಕರು, ಹಿರಿಯ ನಾಯಕರು ಈ ಜಾರಿ ಗಣತಿ ವರದಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಇಂದಿನ ಸಭೆಯಲ್ಲಿ ರಾಹುಲ್ ಗಾಂಧಿ ಮಹತ್ವದ ಚರ್ಚೆ ಮಾಡಿದ್ದು, ಮತ್ತೆ ಮರು ಸರ್ವೆ ಮಾಡಲು ಸಿಎಂ ಸಿದ್ದರಾಮಯ್ಯಗೆ ಸೂಚನೆ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *