ಚಾಮರಾಜಪೇಟೆಯ ಮನೆಯೊಂದರಲ್ಲಿ ಕೇರ್ ಟೇಕರ್ ಆಗಿರುವ ಮಹಿಳೆಯೊಬ್ಬಳು ಆ ಮನೆಯಿಂದ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ 67 ಲಕ್ಷ ನಗದು ದೋಚಿರುವ ಪ್ರಕರಣ ಬಹಿರಂಗಗೊಂಡಿದೆ.
ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಮೂಲಕ ಕೇರ್ ಟೇಕರ್, ಆರೋಪಿ ಉಮಾ ಎಂಬಾಕೆಯನ್ನು ಬಂಧಿಸಿದ್ದಾರೆ. ಈಕೆ ಚಾಮರಾಜನಗರ ಜಿಲ್ಲೆಯ ನಿವಾಸಿಯಾಗಿದ್ದು, ಮೂರು ತಿಂಗಳಿಂದ ನಗರ್ತಪೇಟೆಯೊಂದರ ಉದ್ಯಮಿ ಮನೆಗೆ ಕೆಲಸಕ್ಕೆ ಸೇರಿಕೊಂಡಿದ್ದಳು.
ರಾಧ ಎಂಬವರು ನಗರ್ತಪೇಟೆಯಲಿ ಸ್ವಂತ ಸೆಕ್ಯೂರಿಟಿ ಎಜೆನ್ಸಿ ಹೊಂದಿದ್ದಾರೆ. 8 ತಿಂಗಳಿನಿಂದ ರಾಧಾ ಅವರ ಅಕ್ಕ ಸುಜಾತ ಹುಷಾರಿರಲಿಲ್ಲ. ಸುಜಾತ ಬೆಡ್ ರಿಡೆನ್ ಆಗಿದ್ದರಿಂದ ನೋಡಿಕೊಳ್ಳಲು ಸೆಕ್ಯೂರಿಟಿ ಏಜೆನ್ಸಿಯೊಂದರ ಮೂಲಕ ಉಮಾ ಅವರನ್ನು ಕೇರ್ ಟೇಕರ್ ಆಗಿ ನೇಮಕ ಮಾಡಿದ್ದಾರೆ. ಉಮಾ 3 ತಿಂಗಳಿಂದ ಚೆನ್ನಾಗಿ ಕೆಲಸ ಮಾಡಿ ನಂಬಿಕೆ ಗಳಿಸಿದ್ದಾಳೆ. ಮನೆಯವರ ಎಲ್ಲ ವ್ಯವಹಾರವನ್ನು ಗಮನಿಸಿದ್ದಾರೆ.
ಸುಜಾತ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಸೈಟ್ ಮಾರಿ 67 ಲಕ್ಷ ನಗದು ಬೀರುವಿನಲ್ಲಿ ಇಟ್ಟಿದ್ದರು. 95 ಲಕ್ಷ ಮೌಲ್ಯದ ಚಿನ್ನಾಭರಣ ಕೂಡ ಮನೆಯಲ್ಲಿ ಇಟ್ಟುಕೊಂಡಿದ್ದರು. ಇದನ್ನು ಗಮನಿಸಿದ ಕೇರ್ ಟೇಕರ್ ಉಮಾ ಸುಜಾತಾ ಅವರು ನಿದ್ರೆಯಲ್ಲಿದ್ದಾಗ ಬೀರುವಿನಲ್ಲಿದ್ದ 67 ಲಕ್ಷ ಹಣ, ಚಿನ್ನಾಭರಣವನ್ನು ದೋಚಿಕೊಂಡು ಹೋಗಿದ್ದಾಳೆ.
ಕೆಲವು ದಿನಗಳ ನಂತರ ಜೂ.9ರಂದು ಮನೆಯಲ್ಲಿ ಹಣ ಮತ್ತು ಚಿನ್ನಾಭರಣ ಇಲ್ಲದಿರುವುದು ತಿಳಿದು ಉಮಾಳನ್ನು ವಿಚಾರಣೆ ಮಾಡಿದ್ದಾರೆ. ತನಗೇನೂ ಗೊತ್ತಿಲ್ಲ ಎಂದು ಹೇಳಿ ಎಂದಿನಂತೆ ಕೆಲಸ ಮಾಡಿಕೊಂಡು ಹೋಗಿದ್ದಾಳೆ. ಮನೆಯವರು ಸಿಸಿಟಿವಿ ಪರಿಶೀಲನೆ ಮಾಡಿದಾಗ ಕೇರ್ ಟೇಕರ್ ಉಮಾ ಒಂದು ದಿನ ಕೆಲಸಕ್ಕೆ ಬರುವಾಗ ಖಾಲಿ ಕೈಯಲ್ಲಿ ಬಂದು ಹೋಗುವಾಗ ಬ್ಯಾಗ್ ಹಿಡಿದುಕೊಂಡು ಹೋಗಿದ್ದು ಪತ್ತೆಯಾಗಿದೆ.
ಮನೆಯವರು ಕೂಡಲೇ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಉಮಾಳನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ದಾರೆ. ಆಗ ಕಳ್ಳತನ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಉಮಾ ಮಗಳ ಮನೆಯಲ್ಲಿ ಹಣ ಹಾಗೂ ಚಿನ್ನಾಭರಣ ಬ್ಯಾಗ್ ಬಚ್ಚಿಟ್ಟಿದ್ದಳು. ಪೊಲೀಸರು ರೂ. 60 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ ಉಳಿದ ಹಣ ಮತ್ತು ಆಭರಣಕ್ಕಾಗಿ ಶೋಧ ಮುಂದುವರಿಸಿದ್ದಾರೆ.