ದಾವಣಗೆರೆ ಜಗಳೂರು ತಾಲೂಕಿನ ಕೆಳಗೋಟೆ ಗ್ರಾಮದಲ್ಲಿ ಅಡಕೆ ತೋಟದಲ್ಲಿ ಕಳೆನಾಶಕ ಸಿಂಪಡಿಸಿದ ಹುಲ್ಲು ಮೇಯ್ದು ಮೂರು ಎಮ್ಮೆಗಳು ಮೃತಪಟ್ಟಿವೆ.
ಕಳೆನಾಶಕ ಸಿಂಪಡಿಸಿದ್ದು ತಿಳಿಯದ ಕೆಳಗೋಟೆ ಗ್ರಾಮದ ರೇಣುಕಮ್ಮ ಎಂಬವರ ಒಂದು ಎಮ್ಮೆ ಮತ್ತು ನಿಂಗಪ್ಪ ಎಂಬವರ ಎರಡು ಎಮ್ಮೆಗಳು ಸತ್ತಿವೆ. ಮೃತಪಟ್ಟ ಎಮ್ಮೆಗಳ ಅಂದಾಜು ಮೌಲ್ಯ 1 ಲಕ್ಷ ರೂ. ಎನ್ನಲಾಗಿದೆ.
ಬೇಸಿಗೆಯಲ್ಲಿ ಮೇವು ಇಲ್ಲದ ಕಾರಣ ಎಮ್ಮೆಗಳನ್ನು ಅಡಕೆ ತೋಟಗಳಲ್ಲಿ ಮೇಯಲು ಬಿಟ್ಟಿದ್ದಾರೆ. ಕಳೆನಾಶ ಸಿಂಪಡಿಸಿದ್ದು ತಿಳಿಯದ ಕಾರಣ ಮೇಯಲು ಬಿಟ್ಟಿದ್ದೇ ಎಮ್ಮೆಗಳ ಸಾವಿಗೆ ಕಾರಣವಾಗಿದೆ. ಹುಲ್ಲು ಮೇಯ್ದ ಕೆಲವೇ ಗಂಟೆಗಳಲ್ಲಿ ಮೂರು ಎಮ್ಮೆಗಳ ಹೊಟ್ಟೆ ಉಬ್ಬರವಾಗಿ ಸ್ಥಳದಲ್ಲೇ ಅಸು ನೀಗಿವೆ.
ಪಶುವೈದ್ಯ ವಿಸ್ತರಣಾಧಿಕಾರಿ ಡಾ.ವೀರೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಳೆ ನಾಶಕ ಎಮ್ಮೆಗಳ ಸಾವಿಗೆ ಕಾರಣ ಎಂದು ಪತ್ತೆ ಹಚ್ಚಿದ್ದು, ವರದಿ ಬಂದ ನಂತರ ಸಾವಿನ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ.