ಮೈಸೂರಿನಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಡೆತ್ ನೋಟ್ನಲ್ಲಿ ಹಲವು ವಿಚಾರಗಳು ಬಹಿರಂಗಗೊಂಡಿವೆ. ಈ ಕುಟುಂಬ
ಎರಡು ವರ್ಷದ ಹಿಂದೆಯೇ ಆತ್ಮಹತ್ಯೆಗೆ ಮನಸ್ಸು ಮಾಡಿತ್ತು ಎಂಬ ಅಂಶ ಡೆತ್ ನೋಟ್ನಲ್ಲಿದೆ.
ಎರಡು ವರ್ಷದ ಹಿಂದೆ ಕೇರಳದ ಕೂಲಿ ಕೆಲಸದವನ ಜೊತೆ ತಮ್ಮನ ಹೆಂಡತಿ ಓಡಿ ಹೋಗಿದ್ದಳು. ಇದರಿಂದ ಅವಮಾನ ಆಯಿತು ಎಂದು ಸಾಮೂಹಿಕ ಆತ್ಮಹತ್ಯೆಗೆ ಕುಟುಂಬ ನಿರ್ಧರಿಸಿತ್ತು. ವಯಸ್ಸಾದ ತಂದೆ ತಾಯಿ ಇರುವ ತನಕ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಪ್ರಯತ್ನ ಕೈ ಬಿಟ್ಟಿದ್ದರು. ತಂದೆ ತಾಯಿಯ ಅಂತ್ಯಸಂಸ್ಕಾರದ ನಂತರವೇ ಸಾಯೋಣ ಎಂದು ಮಹದೇವಸ್ವಾಮಿ ನಿರ್ಧರಿಸಿದ್ದರು.
ತಮ್ಮನ ಮಕ್ಕಳಿನ್ನೂ ಚಿಕ್ಕವರಿದ್ದು, ಅವರನ್ನು ಕೊಲ್ಲಲು ಅಧಿಕಾರ ಇಲ್ಲ. ಅವರಿಗೆ ಉತ್ತಮ ಭವಿಷ್ಯ ಕೊಡಿಸಬೇಕು ಅಂದುಕೊಂಡಿದ್ದರು. ಆದರೆ ಈಗ ಮಗಳ ವಿಚಾರದಲ್ಲೂ ಅದೇ ಆಗಿದ್ದರಿಂದ ಕುಟುಂಬ ಖಿನ್ನತೆಗೆ ಒಳಗಾಗಿತ್ತು. ಅವಮಾನ ಸಹಿಸಲಾಗದೆ ಸಾವಿನ ದಡ ಸೇರುತ್ತಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿರುವ ಮಹದೇವ ಸ್ವಾಮಿ ಕುಟುಂಬ ಬರೆದಿದೆ.
ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನ ಕಿರಿಯ ಮಗಳಿಂದ ನಾಲ್ಕು ಪುಟಗಳ ಡೆತ್ ನೋಟ್ ಬರೆಸಿರುವ ತಂದೆ ಮಹದೇವಸ್ವಾಮಿ, ಹಿರಿಯ ಮಗಳು ಪ್ರೀತಿ ಮಾಡುತ್ತಿರುವ ಹುಡುಗ ಭರತ್ ಸರಿ ಇಲ್ಲ. ಈ ಹಿಂದೆ ಅವನಿಗೆ ಲವ್ ಬ್ರೇಕ್ ಅಪ್ ಆಗಿದೆ. ಈ ಬಗ್ಗೆ ನಮ್ಮ ಮಗಳಿಗೆ ಎಷ್ಟೇ ಹೇಳಿದ್ರು ನಮ್ಮ ಮಾತು ಕೇಳದೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳುವುದಾಗಿ ತಿಳಿಸಿದ್ದಾಳೆ. ಮರ್ಯಾದೆಗೆ ಅಂಜಿ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ಬೂದನೂರು ಗ್ರಾಮದಲ್ಲಿರುವ ಮನೆ ಹಾಗೂ ಎಚ್ಡಿ ಕೋಟೆಯಲ್ಲಿರುವ ಮನೆ ಹಾಗೂ ಜಮೀನನ್ನು ನನ್ನ ತಮ್ಮನಿಗೆ ನೀಡಿ. ಮನೆಯಲ್ಲಿರುವ 2.5 ಲಕ್ಷ ಹಣವನ್ನ ಸಹೋದರ ನೀಡಿ. ಯಾವುದೇ ಕಾರಣಕ್ಕೂ ನನ್ನ ಆಸ್ತಿ ನನ್ನ ಮಗಳಿಗೆ ಕೊಡಬೇಡಿ. ನಮ್ಮ ಶವಕ್ಕೆ ಅಗ್ನಿ ಸ್ಪರ್ಶ ಮಾಡಿ, ಯಾವುದೇ ಕಾರಣಕ್ಕೆ ಹೂಳಬೇಡಿ ಎಂದು ಬರೆಯಲಾಗಿದೆ. ಸಾಯುವ ಹಿಂದಿನ ದಿನ ಯಾರಿಗೆಲ್ಲಾ ಹಣ ಕೊಡಬೇಕಿತ್ತೋ ಅವರಿಗೆಲ್ಲ ಗೂಗಲ್ ಪೇ ಮೂಲಕ ಮಹದೇವಸ್ವಾಮಿ ಹಣ ನೀಡಿದ್ದರು.