ಹಾಸನ ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಜೋಡಿಯೊಂದರ ಮದುವೆಗೆ ತಯಾರಿ ನಡೆದಿದ್ದು, ವಧು, ವರರ ಕುಟುಂಬಗಳು ಮದುವೆಗೆ ಎಲ್ಲ ಸಿದ್ಧತೆ ನಡೆಸಿವೆ, ಸಾವಿರಕ್ಕೂ ಹೆಚ್ಚು ಆಪ್ತರು, ಕುಟುಂಬಸ್ಥರು ಆಗಮಿಸಿದ್ದರು. ಆದರೆ ಕೊನೆಯ ಘಳಿಗೆಯಲ್ಲಿ ಮದುವೆ ನಿಂತು ಹೋಗಿದೆ.
ಹಾಸನ ತಾಲೂಕಿನ ಬೂವನಹಳ್ಳಿ ಗ್ರಾಮದ ಪಲ್ಲವಿ ಹಾಗೂ ಆಲೂರು ತಾಲೂಕಿನ ವೇಣುಗೋಪಾಲ ಜಿ ಮದುವೆ ನಿಶ್ಚಯವಾಗಿತ್ತು. ತಾಳಿ ಕಟ್ಟುವ ಮೊದಲು ವಧುವಿಗೆ ಪ್ರಿಯಕರನ ಕರೆ ಬಂದಿದೆ, ಕೂಡಲೇ ತನಗೆ ಮದುವೆ ಬೇಡ ಎಂದಿದ್ದಾಳೆ. ಆರಂಭದಲ್ಲಿ ಕಾರಣ ಹೇಳದೆ ಮದುವೆ ಬೇಡ ಎಂದಿದ್ದಾಳೆ. ಆಗ ವರನು ವಧುವಿನ ಬಳಿ ಕಾರಣ ವನ್ನೂ ಕೇಳಿದ್ದಾನೆ. ಪೋಷಕರು, ಕುಟುಂಬಸ್ಥರು ವಧುವನ್ನು ಮನ ಒಲಿಸುವ ಪ್ರಯತ್ನ ಮಾಡಿದ್ದಾರೆ. ಆಕೆ ತಾನು ಬೇರೊಬ್ಬ ಹುಡುಗನ ಪ್ರೀತಿಸುತ್ತಿರುವುದಾಗಿ ಹೇಳಿದ್ದಾಳೆ. ಪೋಷಕರು, ಆಪ್ತರು ತಾಳಿ ಕಟ್ಟಲು ಸೂಚಿಸಿದರೂ ವರ ತಾಳಿ ಕಟ್ಟಲಿಲ್ಲ. ವಧು ಮದುವೆ ಮಂಟಪದಿಂದ ಹೊರ ನಡೆದಿದ್ದಾಳೆ.
ಈಶ್ವರಹಳ್ಳಿ ಕೂಡಿಗೆಯಲ್ಲಿ ಸರ್ಕಾರಿ ಶಾಲೆ ಶಿಕ್ಷಕನಾಗಿರುವ ವೇಣುಗೋಪಾಲ.ಜಿ ಬಹಳಷ್ಟು ಖರ್ಚು ಮಾಡಿ ಅದ್ಧೂರಿ ಮದುವಗೆ ವ್ಯವಸ್ಥೆ ಮಾಡಿದ್ದ. ಆದರೆ ಕೊನೆಗೆ ಮದುವೆ ಆಗಲಿಲ್ಲ.
ಕೊನೆಯ ಕ್ಷಣದಲ್ಲಿ ಮದುವೆ ಬೇಡ ಎಂದ ಮಗಳನ್ನು ಪೋಷಕರು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಆದರೆ ಆಕೆ ನಿರ್ಧಾರ ಬದಲಿಸಿಲ್ಲ. ಮಗಳ ನಿರ್ಧಾರದಿಂದ ಆಘಾತಗೊಂಡ ಪೋಷಕರು ಕಣ್ಣೀರಿಟ್ಟಿದ್ದಾರೆ. ಮದುವೆ ಬೇಡ ಎಂದು ಹಸಮಣೆಯಿಂದ ಎದ್ದ ವಧು ಕಾರಿನ ಮೂಲಕ ಮದುವೆ ಮಂಟಪದಿಂದ ತೆರಳಿದ್ದಾಳೆ. ಎರಡೂ ಕುಟುಂಬದ ನಡುವೆ ಗಲಾಟೆ ನಡೆದಿದೆ. ಬಡಾವಣೆ ಹಾಗೂ ನಗರಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿ ದ್ದಾರೆ.