ಬೆಂಗಳೂರು: ಹೈಕೋರ್ಟ್,ಇಸ್ರೇಲ್ ರಾಯಭಾರಿ ಕಚೇರಿ ಸೇರಿ 6 ಕಡೆಗಳಲ್ಲಿ ಆರ್ಡಿಎಕ್ಸ್ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಬೆದರಿಕೆ ಸಂದೇಶ ಬಂದಿದೆ.
ಶುಕ್ರವಾರ ಪ್ರಾರ್ಥನೆಯ ವೇಳೆಗೆ ಸ್ಫೋಟ ಆಗುತ್ತದೆ ಎಂದು ಬೆದರಿಕೆ ಸಂದೇಶ ಬಂದಿದ್ದು, ತಕ್ಷಣವೇ ಅಲರ್ಟ್ ಆದ ಪೊಲೀಸರು ತಪಾಸಣೆ ನಡೆಸಿದ್ದಾರೆ. ಈ ವೇಳೆ ಇದು ಹುಸಿ ಸಂದೇಶ ಎಂದು ಗೊತ್ತಾಗಿದೆ.
ಆರು ಕಡೆಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಇಮೇಲ್ ಸಂದೇಶ ಬಂದಿದೆ. ಜೊತೆಗೆ ಹೈಕೋರ್ಟ್ಗೂ ಬಾಂಬ್ ಇಟ್ಟಿರುವುದಾಗಿ ಬೆದರಿಸಲಾಗಿತ್ತು. ಇಮೇಲ್ ಮಾಡಿದ ‘ರಾಮಸ್ವಾಮಿ’ಯನ್ನು ಹುಡುಕಲು ಪೊಲೀಸರು ಮುಂದಾಗಿದ್ದು, ಹಾಟ್ಮೇಲ್ಗೆ ಪತ್ರ ಬರೆದು ಮಾಹಿತಿ ಕೇಳಿದ್ದಾರೆ. ಆದರೆ ಹಾಟ್ಮೇಲ್ನಿಂದ ಯಾವುದೇ ರೆಸ್ಪಾನ್ಸ್ ಸಿಕ್ಕಿಲ್ಲ. ಹೀಗಾಗಿ ಐಪಿ ಅಡ್ರೆಸ್ ಮೂಲಕ ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಕಳೆದ 10 ದಿನಗಳಿಂದ ವಿಶೇಷ ತಂಡದಿಂದ ಹುಡುಕಾಟ ನಡೆದಿದ್ದು, ಈ ಸಂಬಂಧ ವಿಧಾನಸೌಧ ಹಾಗು ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ. ಬೆದರಿಕೆ ಹಾಕುತ್ತಿರುವವರು ಡಾರ್ಕ್ ವೆಬ್ ಹಾಗೂ ವಿಪಿಎನ್ಗಳನ್ನು ಬಳಸಿ ಗುರುತು ಸಿಗದಂತೆ ನೋಡಿಕೊಂಡಿದ್ದಾರೆ. ಆದರೆ ರಾಮೇಶ್ವರಂ ಕೆಫೆ ಸ್ಫೋಟದ ಬಳಿಕ, ಯಾವುದೇ ಬಾಂಬ್ ಬೆದರಿಕೆ ಕರೆಯನ್ನು ಪೊಲೀಸರು ಲಘುವಾಗಿ ಪರಿಗಣಿಸುತ್ತಿಲ್ಲ.