Menu

ಬೆಂಗಳೂರಿನಲ್ಲಿ ಕಾವೇರಿ ನೀರು ಕಳವು ತಡೆಗೆ ಬ್ಲೂ ಫೋರ್ಸ್‌

ಕಾವೇರಿ ನೀರಿನ ಕಳವು, ಕೊಳಚೆ ಹಾಗೂ ಮಳೆ ನೀರನ್ನು ಚರಂಡಿ (ಸ್ಯಾನಿಟರಿ) ಕೊಳವೆಗೆ ಹರಿಸುವವರನ್ನು ಪತ್ತೆ ಹಚ್ಚಲು ಬೆಂಗಳೂರು ಜಲಮಂಡಳಿಯು ‘ಬ್ಲೂ ಫೋರ್ಸ್‌’ ಪಡೆ ರಚಿಸುತ್ತಿದೆ.

ಕಾವೇರಿ 5ನೇ ಹಂತ ಸೇರಿದಂತೆ ಪ್ರತಿದಿನ ನಗರಕ್ಕೆ 2,225 ಎಂಎಲ್‌ಡಿ ಕಾವೇರಿ ನೀರನ್ನು ಪೂರೈಕೆ ಮಾಡುತ್ತಿದ್ದು, 11 ಲಕ್ಷಕ್ಕೂ ಅಧಿಕ ನೀರು ಪೂರೈಕೆಯ ಅಧಿಕೃತ ಸಂಪರ್ಕ ಹೊಂದಿದೆ. ಕಾವೇರಿ ನೀರಿನ ಕಳವು, ತ್ಯಾಜ್ಯ ನೀರನ್ನು ಅನಧಿಕೃತವಾಗಿ ಸ್ಯಾನಿಟರಿ ಕೊಳವೆಗೆ ಹರಿಸುತ್ತಿರುವುದರಿಂದ ಬೆಂಗಳೂರು ಜಲಮಂಡಳಿಯು ಮಾಸಿಕ ಕೋಟ್ಯಾಂತರ ರೂ. ನಷ್ಟ ಅನುಭವಿಸುತ್ತಿದೆ. ಇದನ್ನು ತಡೆಯಲು ಬೆಂಗಳೂರು ಜಲಮಂಡಳಿಯು ಬ್ಲೂ ಪೋರ್ಸ್‌ ಎಂಬ ಪಡೆ ಸ್ಥಾಪಿಸುವುದಕ್ಕೆ ತಯಾರಿ ಮಾಡಿಕೊಂಡಿದೆ.

ಬೆಂಗಳೂರು ಜಲಮಂಡಳಿಯ 43 ಉಪ ವಿಭಾಗಗಳಲ್ಲಿ ತಲಾ ಒಂದು ಬ್ಲೂ ಪೋರ್ಸ್‌ ರಚನೆ ಮಾಡಲಾಗುತ್ತಿದೆ. ಪ್ರತಿ ತಂಡದಲ್ಲಿ ತಲಾ ಒಬ್ಬ ಮಾಜಿ ಸೈನಿಕ, ಅವರೊಂದಿಗೆ ಜಲಮಂಡಳಿಯ ಮೂರು ಅಧಿಕಾರಿ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ. ತಂಡಗಳು ಆಯಾ ಉಪ ವಿಭಾಗ ಮಟ್ಟದಲ್ಲಿ ನಿರಂತರವಾಗಿ ಪರಿಶೀಲನೆ ನಡೆಸಿ ಅನಧಿಕೃತ ನೀರು, ತ್ಯಾಜ್ಯ ಸಂಪರ್ಕ ಪತ್ತೆ ಮಾಡಬೇಕು. ಪ್ರತಿ ಉಪ ವಿಭಾಗದ ಮಟ್ಟದಲ್ಲಿ 30 ಸಾವಿರ ಸಂಪರ್ಕಗಳಿವೆ. ಎಷ್ಟು ಕಟ್ಟಡಗಳು ನೀರಿನ ಸಂಪರ್ಕ ಪಡೆದುಕೊಂಡಿವೆ. ಎಷ್ಟು ಕಟ್ಟಡ ಪಡೆದುಕೊಂಡಿಲ್ಲ. ಆ ಕಟ್ಟಡಗಳ ನೀರಿನ ಮೂಲ ಏನು, ಸ್ಯಾನಿಟರಿ ನೀರನ್ನು ಎಲ್ಲಿ ಹರಿಸಲಾಗುತ್ತಿದೆ ಎಂಬುದನ್ನು ಪತ್ತೆ ಮಾಡುವ ಕಾರ್ಯವನ್ನು ಪಡೆ ನಿರ್ವಹಿಸಲಿದೆ. ಅನಧಿಕೃತವಾಗಿ ಜಲಮಂಡಳಿಯ ಸ್ಯಾನಿಟರಿ ಕೊಳವೆಗೆ ತ್ಯಾಜ್ಯ ನೀರನ್ನು ಹರಿಸುವುದು ಕಂಡು ಬಂದರೆ ದಂಡ ವಿಧಿಸಲಾಗುವುದು. ಅಧಿಕೃತವಾಗಿ ನೀರಿನ ಸಂಪರ್ಕ ಪಡೆದುಕೊಂಡ ಕಟ್ಟಡಗಳಲ್ಲಿಯೂ ಜಲಮಂಡಳಿಯ ಮೀಟರ್‌ಗಳನ್ನು ಬಳಸಿ ನೀರಿನ ಕಳವು ಮಾಡಲಾಗುತ್ತಿದೆಯಾ ಎಂಬುದನ್ನೂ ಪರಿಶೀಲನೆ ಮಾಡಲಾಗುತ್ತದೆ. ನಗರಕ್ಕೆ ಪೂರೈಕೆ ಆಗುತ್ತಿರುವ ನೀರಿನಲ್ಲಿ ಶೇ.28 ರಷ್ಟು ಕಾವೇರಿ ನೀರು ಜಲಮಂಡಳಿಯ ಲೆಕ್ಕಕ್ಕೆ ದೊರೆಯುತ್ತಿಲ್ಲ. ಹಳೆ ಕೊಳವೆಗಳಲ್ಲಿ ಸೋರಿಕೆಯಿಂದ ಪ್ರಮಾಣವೂ ಇದೆ.

ಬ್ಲೂ ಫೋರ್ಸ್‌ ತಂಡದಲ್ಲಿನ ಸಿಬ್ಬಂದಿ ವೇತನ, ಬಳಕೆ ಮಾಡುವ ವಾಹನದ ಇಂಧನ ವೆಚ್ಚ ಸೇರಿದಂತೆ ಮಾಸಿಕ₹50 ಲಕ್ಷ ವೆಚ್ಚವಾಗಲಿದೆ ಎಂದು ಜಲಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯ ನೀರನ್ನು ಜಲಮಂಡಳಿಯ ಸ್ಯಾನಿಟರಿ ಕೊಳವೆಗೆ ಹರಿಸುತ್ತಿರುವುದರಿಂದ ಮಳೆ ಬಂದಾಗ ಮ್ಯಾನ್‌ ಹೋಲ್‌ಗಳು ಉಕ್ಕುತ್ತಿರುವುದರಿಂದ ರಸ್ತೆ ಗಬ್ಬು ವಾಸನೆ ಉಂಟಾಗುವ ಕುರಿತು ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಮಳೆ ನೀರನ್ನು ಸ್ಯಾನಿಟರಿ ಕೊಳವೆ ಹರಿಸುವವರಿಗೆ ₹5 ಸಾವಿರ ದಂಡ ವಿಧಿಸುವುದಕ್ಕೆ ತೀರ್ಮಾನಿಸಲಾಗಿದ್ದು, ಒಂದೆರಡು ದಿನದಲ್ಲಿ ಜಲಮಂಡಳಿ ಅಧಿಕೃತ ಆದೇಶ ಹೊರಡಿಸಲಿದೆ.

Related Posts

Leave a Reply

Your email address will not be published. Required fields are marked *