ಸಂಘ ಪರಿವಾರದವರು ಕೆಲವು ಕಡೆ ಬುರ್ಖಾ ಹಾಕಿಕೊಂಡು ಗಲಾಟೆ ಮಾಡಲು ಹೋಗುತ್ತಾರೆ, ಇದೇನು ಹೊಸದಲ್ಲ, ನನ್ನ ಬಳಿ ವೀಡಿಯೊ ಇದೆ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಆರೆಸ್ಸೆಸ್ಗೆ ನೂರು ವರ್ಷ ತುಂಬುತ್ತಿದೆ. ಅವರ ಎಲ್ಲಾ ಚಿಂತನೆಗಳನ್ನು ಅನುಷ್ಟಾನಕ್ಕೆ ತರಲು ಪ್ರಯತ್ನ ಮಾಡ್ತಿದ್ದಾರೆ. ಅದಕ್ಕೆ ಹೀಗೆಲ್ಲ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಅವರ ಚಿಂತನೆ ಅನುಷ್ಠಾನ ಸಾಧ್ಯವಿಲ್ಲ. ಶಾಂತಿ ಕದಡುವ ಯತ್ನವನ್ನು ಅವರೇ ಮಾಡ್ತಿ ದ್ದಾರೆ. ವಿಜಯಪುರದಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿದವನು ಸಂಘ ಪರಿವಾರದವನು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾರೇ ಆಗಲಿ ಯಾವುದೇ ಧರ್ಮ ಜಾತಿ ಭಾಷೆ ಹೆಸರಲ್ಲಿ ಶಾಂತಿ ಕದಡಿದ್ರೆ ಕಾನೂನಿನ ಮೂಲಕ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಶಾಂತಿ ಕದಡಲು ಬಹಳ ಪ್ರಯತ್ನ ಮಾಡ್ತಿದ್ದಾರೆ. ಬಿಜೆಪಿ ಅಧಿಕಾರ ಇದ್ದಾಗ ಸೃಷ್ಟಿಯಾದ ಅಶಾಂತಿಯ ವಾತಾವರಣ ಶೇ. 90 ರಷ್ಟು ಎರಡೇ ತಿಂಗಳಲ್ಲಿ ಕಮ್ಮಿ ಆಗಿದೆ. ಮೈಸೂರಿನ ಉದಯಗಿರಿ ಗಲಾಟೆ ಬಿಜೆಪಿ ಆರ್ ಎಸ್ ಎಸ್ ಕೃಪಾಪೋಷಿತ ಕೃತ್ಯಗಳು. ಈ ಬಗ್ಗೆ ಗೃಹಸಚಿವರು ಗಮನ ಹರಿಸಲಿ ಎಂದು ಕೇಳುತ್ತೇನೆ ಎಂದರು.
ಕೆಪಿಸಿಸಿ ಅಧ್ಯಕ್ಷರು, ಮಂತ್ರಿಗಳ ಬದಲಾವಣೆ ಎಲ್ಲವೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ಈಗ ಕಲಬುರಗಿಯಲ್ಲೆ ಇದೆ. ಸರ್ಕಾರ ಬಂದಾಗಿನಿಂದಲೂ ಈ ರೀತಿಯ ಚರ್ಚೆ ನಡೆಯುತ್ತಿದೆ. ರಾಜಕೀಯದಲ್ಲಿ ಇವೆಲ್ಲಾ ಚರ್ಚೆಗಳು ನಡೆಯುತ್ತಲೇ ಇರುತ್ತವೆ ಎಂದು ಹೇಳಿದ್ದಾರೆ.