Menu

ಮಹಾತ್ಮಾ ಗಾಂಧಿ ಹೆಸರು ಬದಲಿಸುವ ಕೆಲಸ ಮಾಡಿದ ಬಿಜೆಪಿಯ ಅಂತಿಮ ದಿನಗಳು ಸಮೀಪಿಸುತ್ತಿವೆ: ಡಿಕೆ ಶಿವಕುಮಾರ್

“ದೀಪ ಆರುವಾಗ ಜೋರಾಗಿ ಉರಿಯುತ್ತದೆಯಂತೆ. ಅದೇ ರೀತಿ ಬಿಜೆಪಿಯ ಅಂತಿಮ ದಿನಗಳು ಸಮೀಪಿಸಿರುವ ಕಾರಣ, ಮಹಾತ್ಮಾ ಗಾಂಧಿ ಅವರ ಹೆಸರು ಬದಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ” ಎಂದು ಡಿಸಿಎಂ ಡಿಕೆ ಶಿವಕುಮಾರ್  ವಾಗ್ದಾಳಿ ನಡೆಸಿದರು.

ಚಿಕ್ಕಬಳ್ಳಾಪುರದಲ್ಲಿ ನಡೆದ ಮನರೇಗಾ ಬಚಾವೋ  ಪ್ರತಿಭಟನಾ ಸಮಾವೇಶದಲ್ಲಿ  ಅವರು ಮಾತನಾಡಿದರು. ಈ ದೇಶ ಉಳಿಸಲು ಇಂದು ನಾವು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಪಕ್ಷ ಸದಾ ಎಲ್ಲಾ ವರ್ಗದ ಜನರಿಗೆ ಕಾರ್ಯಕ್ರಮ ನೀಡುತ್ತಾ ಬದುಕಿನಲ್ಲಿ ಬದಲಾವಣೆ ತರುವ ಕೆಲಸ ಮಾಡಿಕೊಂಡು ಬರುತ್ತಿದೆ. ಮಹಾತ್ಮ ಗಾಂಧಿ ಅವರ ಹೆಸರಿನಲ್ಲಿ 20 ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರವು ಬಡವರಿಗಾಗಿ ಉದ್ಯೋಗ ಖಾತರಿ ಕಾರ್ಯಕ್ರಮ ನೀಡಿತ್ತು. ಇದು ದೇಶದ ಪಾಲಿಗೆ ಕ್ರಾಂತಿಕಾರಿ ಕಾರ್ಯಕ್ರಮ” ಎಂದರು.

“ಈ ಕಾರ್ಯಕ್ರಮದಲ್ಲಿ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಯಾವ ಕಾಮಗಾರಿ ಮಾಡಬೇಕು ಎಂಬ ತೀರ್ಮಾನ ಮಾಡುವ ಅಧಿಕಾರ ಹೊಂದಿದ್ದವು. ಹಸಿದ ಹೊಟ್ಟೆ, ಖಾಲಿ ಜೇಬಿನ ನೋವು ಏನು ಎಂಬುದು ನಮಗೆ ಅರಿವಿದೆ. 60% ಗ್ರಾಮೀಣ ಭಾಗದ ಮಹಿಳೆಯರು ಕೂಲಿ ಮಾಡುತ್ತಿದ್ದಾರೆ. ರಾಜ್ಯದಲ್ಲಿರುವ 5900 ಪಂಚಾಯ್ತಿಗಳಲ್ಲಿ, ಕನಿಷ್ಠ 1-2 ಕೋಟಿಯಷ್ಟು ಹಣವನ್ನು ಪಂಚಾಯಿತಿಗಳಲ್ಲಿ ನೀಡಿ ಅಲ್ಲಿ ಶಾಶ್ವತ ಆಸ್ತಿ ಸೃಷ್ಟಿಸಿ ಜನರಿಗೆ ಉದ್ಯೋಗ ಕಲ್ಪಿಸಲಾಗುತ್ತಿತ್ತು. ಮನರೇಗಾ ಉಳಿಸುವ ಮೂಲಕ, ಹಳ್ಳಿಗಳು, ಈ ದೇಶ, ಕಾರ್ಮಿಕರು, ಪಂಚಾಯಿತಿಗಳು ಹಾಗೂ ಮಹಾತ್ಮ ಗಾಂಧಿ ಅವರ ಹೆಸರು ಉಳಿಸಬೇಕಾಗಿದೆ” ಎಂದು ಕರೆ ನೀಡಿದರು.

ನಮ್ಮ ಪಕ್ಷ ಹಾಗೂ ಸರ್ಕಾರ ಚರ್ಚೆ ಮಾಡಿ ಪ್ರತಿ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಮಹಾತ್ಮಾ ಗಾಂಧಿ ಹೆಸರಿಡಲು ತೀರ್ಮಾನಿಸಿದ್ದೇವೆ. ಉದ್ಯೋಗ ಖಾತರಿ ಯೋಜನೆ ಕಾಂಗ್ರೆಸ್ ಕಾರ್ಯಕ್ರಮ ಮಾತ್ರವಲ್ಲ. ದೇಶದ ಬಡವರು, ಕೂಲಿ ಕಾರ್ಮಿಕರ ಕಾರ್ಯಕ್ರಮ. ಗ್ರಾಮೀಣ ಭಾಗದ ಕಾರ್ಮಿಕರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮ. ಮತ್ತೊಮ್ಮೆ ಮನರೇಗಾ ಯೋಜನೆ ಮರುಸ್ಥಾಪಿಸಿ, ಉದ್ಯೋಗದ ಹಕ್ಕು ಹಾಗೂ ಗ್ರಾಮಗಳ ಸ್ವಯಂ ಆಡಳಿತ ಹಕ್ಕನ್ನು ಪುನರ್ ಸ್ಥಾಪಿಸಬೇಕಾಗಿದೆ” ಎಂದು ಸಂದೇಶ ನೀಡಿದರು.

“ಕನ್ನಡಿಗರ ಮೇಲೆ, ಬಡವರ ಮೇಲೆ ಅನ್ಯಾಯ ನಡೆಯುತ್ತಿದೆ. ಈಗ ಹೊಸ ಯೋಜನೆಯಲ್ಲಿ ರಾಜ್ಯ ಸರ್ಕಾರ 40% ಅನುದಾನ ಭರಿಸಬೇಕಾಗಿದೆ. ಬಿಜೆಪಿ ಆಡಳಿತ ಯಾವುದೇ ರಾಜ್ಯಗಳಲ್ಲಿ ಈ ಯೋಜನೆ ಜಾರಿಯಾಗುವುದಿಲ್ಲ. ನೆರೆ ರಾಜ್ಯ ಚಂದ್ರಬಾಬು ನಾಯ್ಡು ಅವರು ನಮ್ಮಿಂದ ಸಾಧ್ಯವಿಲ್ಲ ಎಂದಿದ್ದಾರೆ. ಇದರಿಂದ ಸರ್ಕಾರ ಬಿದ್ದು ಹೋಗುವ ಭಯದಿಂದ ಅವರಿಗೆ ಓಲೈಕೆ ಮಾಡುತ್ತಿದ್ದಾರೆ. ಈ ಬಡವರ ರಕ್ಷಣೆಗೆ ನಾವು ಹೋರಾಟ ಮಾಡಬೇಕಿದೆ. ಮರದಿಂದ ಬಿದ್ದ ಹೂವು ಯಾವತ್ತು ಅರಳುವುದಿಲ್ಲ. ನಮ್ಮ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆ ಕಾರ್ಯಕ್ರಮ ನೀಡಿದ್ದು ಕಾರ್ಮಿಕರ ಪ್ರತಿನಿತ್ಯದ ಬದುಕಿಗಾಗಿ. ಅವರ ಹೊಟ್ಟೆ ತುಂಬಿಸಲು. ಆದರೆ ಕೇಂದ್ರ ಸರ್ಕಾರದ ಈ ನೂತನ ಕಾನೂನು ಮರಣ ಶಾಸನವಾಗಿದೆ” ಎಂದು ಕಿಡಿಕಾರಿದರು.

“ನಮ್ಮ ಗ್ಯಾರಂಟಿ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯವರು ಟೀಕೆ ಮಾಡುತ್ತಿದ್ದರು. ಆದರೆ ಈ ಗ್ಯಾರಂಟಿ ಯೋಜನೆಗಳು ದೇಶದ ಯೋಜನೆಯಾಗಿದೆ. ಈ ಯೋಜನೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಹೋರಾಟ ಮಾಡುವವನು ಗೆದ್ದೇ ಗೆಲ್ಲುತ್ತಾನೆ. ಯಾವ ಕಾರಣಕ್ಕೂ ಅವನಿಗೆ ಸೋಲಿನ ಭಯ ಇರುವುದಿಲ್ಲ ಎಂದು ಅಂಬೇಡ್ಕರ್ ಹೇಳಿದ್ದಾರೆ.  ದೇಶದಲ್ಲಿ ಮಹಾತ್ಮಾ ಗಾಂಧಿ ಹೆಸರು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಗಾಂಧಿ ಅವರು ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿಕೊಂಡು ನೂರು ವರ್ಷವಾಗಿದೆ. ಅವರು ಅಧಿಕಾರ ವಹಿಸಿಕೊಂಡ ಬಳಿಕ ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, ಈ ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ನೀಡಿದೆ. ಮನರೇಗಾ ನಾಶವಾಗಲು ಬಿಡುವುದಿಲ್ಲ, ರೈತರ ಉದ್ಯೋಗ ಕಿತ್ತುಕೊಳ್ಳಲು ಅವಕಾಶ ಕೊಡುವುದಿಲ್ಲ” ಎಂದು ಭರವಸೆ ನೀಡಿದರು.

“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಹಕ್ಕು ಕಸಿಯುವ ಪ್ರಯತ್ನದಂತೆ, ಉದ್ಯೋಗದ ಹಕ್ಕನ್ನು ಕಸಿಯಲಾಗುತ್ತಿದೆ. ನಮ್ಮ ತಾಲೂಕಿನಲ್ಲಿ ವರ್ಷಕ್ಕೆ 5 ಕೋಟಿಯಷ್ಟು ಅನುದಾನ ಬಳಸಿಕೊಂಡು ಕೆಲಸ ಮಾಡಿರುವುದಕ್ಕೆ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿದೆ. ಬಡವರ ಬದುಕಿಗೆ ಉದ್ಯೋಗ ಖಾತ್ರಿ ಮೂಲಕ ಹೊಸ ರೂಪ ನೀಡಿದ್ದೇವೆ. 60 ಸಾವಿರ ಇಂಗು ಗುಂಡಿ, 54 ಸಾವಿರ ಕೊಟ್ಟಿಗೆ ನಿರ್ಮಾಣ ಮಾಡಿದ್ದೇವೆ. ನಿಮ್ಮದೇ ಜಮೀನಿನಲ್ಲಿ ಕೂಲಿ ಮಾಡಿಕೊಳ್ಳಲು, ಜಮೀನು ಮಟ್ಟ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದೇವೆ. ಇಂತಹ ಕಾರ್ಯಕ್ರಮವನ್ನು ಬದಲಾಯಿಸಲು ಅವಕಾಶ ನೀಡುವುದು ಬೇಡ. ನಮ್ಮ ಹೋರಾಟಕ್ಕೆ ನಿಮ್ಮ ಸಹಕಾರ ಬೇಕು” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *