ಮತಗಳ್ಳತನದಲ್ಲಿ ಬಿಜೆಪಿಗರು ನಿಸ್ಸೀಮರು. ಇದರ ವಿರುದ್ಧ ರಾಜ್ಯದಲ್ಲಿ ಈವರೆಗೆ ಸುಮಾರು 1,12,41,000 ಸಹಿ ಸಂಗ್ರಹ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿ ಬಳಿಯ ಇಂದಿರಾ ಭವನದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಜೊತೆ ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಂಗ್ರಹಿಸಿರುವ 1 ಕೋಟಿಗೂ ಅಧಿಕ ಸಹಿ ಸಂಗ್ರಹವನ್ನು ನವೆಂಬರ್ 10ರೊಳಗೆ ದೆಹಲಿ ಎಐಸಿಸಿ ಕಚೇರಿಗೆ ಕಳುಹಿಸಿಕೊಡಲಾಗುವುದು ಎಂದರು.
ಮೊದಲ ಬ್ಯಾಚ್ ಸಹಿ ಸಂಗ್ರಹವನ್ನು ದೆಹಲಿಗೆ ಕಳುಹಿಸುತ್ತೇವೆ. ಅದನ್ನು ರಾಷ್ಟ್ರಪತಿಗಳಿಗೆ, ಚುನಾವಣಾ ಆಯೋಗಕ್ಕೆ ಕಳುಹಿಸಿಕೊಡುವ ಕೆಲಸ ಮಾಡುತ್ತೇವೆ. ಮತದಾನ ಮಾಡುವುದು ಪ್ರಜಾಪ್ರಭುತ್ವದ ಬುನಾದಿಯಾಗಿದೆ. ಚುನಾವಣಾ ಆಯೋಗ ಸ್ವತಂತ್ರ ಸಂಸ್ಥೆ ಎಂದು ಸಂವಿಧಾನದಲ್ಲಿ ಮಾಡಲಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಮಧ್ಯ ಪ್ರವೇಶ ಮಾಡಬಾರದು, ಪ್ರಕ್ರಿಯೆ ಸ್ವತಂತ್ರವಾಗಿರಬೇಕು. ಮತದಾರರು ಯಾವುದೇ ಪ್ರಭಾವಕ್ಕೆ ಒಳಗಾಗಬಾರದು. ಬಿಜೆಪಿ ಸುಳ್ಳಿನ ಸರದಾರರು ಮಾತ್ರವಲ್ಲ ಅವರು ಮತಗಳ್ಳತನ ಮಾಡುವಲ್ಲೂ ನಿಸ್ಸೀಮರು ಎಂಬುದನ್ನು ಸಾಬೀತು ಮಾಡಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
“ಮತ ಕದಿಯುವುದೇ ಅವರ ಕಸುಬು. ಇತ್ತೀಚಿನ ವರ್ಷಗಳಲ್ಲಿ ಮತಗಳ್ಳತನ ಮಾಡಿ ಲೋಕಸಭೆಯಲ್ಲಿ ಚುನಾವಣೆಯಲ್ಲಿ, ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಇದನ್ನು ರಾಹುಲ್ ಗಾಂಧಿ ಬಯಲಿಗೆಳೆದಿದ್ದಾರೆ. ಸಾಕ್ಷ್ಯಗಳನ್ನು ಇಟ್ಟುಕೊಂಡು ಅವರನ್ನು ಬಟಾ ಬಯಲು ಮಾಡಿದ್ದಾರೆ. ಬಿಹಾರ ಚುನಾವಣೆಯಲ್ಲೂ ದಿಲ್ಲಿಯಲ್ಲಿ ವೋಟ್ ಮಾಡಿದವರು ಬಿಹಾರದಲ್ಲಿ ವೋಟು ಮಾಡಿದ್ದಾರೆ. ಇದು ಸಂವಿಧಾನ ಬಾಹಿರವಾಗಿದೆ. ಬಿಜೆಪಿ ಸಂವಿಧಾನ ಬಾಹಿರವಾಗಿ ಅಧಿಕಾರ ಹಿಡಿದಿದ್ದಾರೆ. ರಾಹುಲ್ ಗಾಂಧಿ ರಾಜ್ಯಕ್ಕೆ ಬಂದಾಗ ಮಹದೇವಪುರದಲ್ಲಿ ನಡೆದ ಮತಗಳ್ಳತನವನ್ನು ಬಯಲಿಗೆ ಎಳೆದಿದ್ದಾರೆ. ಇಷ್ಟೆಲ್ಲಾ ನಡೆದರೂ ಚುನಾವಣಾ ಆಯೋಗವರು ತನಿಖೆ ಮಾಡಲು ಮುಂದಾಗುತ್ತಿಲ್ಲ” ಎಂದು ಟೀಕಿಸಿದರು.
“ಸಂವಿಧಾನ ರೀತಿಯಲ್ಲಿ ಅವರು ಉತ್ತರ ಕೊಡಬೇಕು. ಅದು ಅವರ ಜವಾಬ್ದಾರಿಯಾಗಿದೆ. ಚುನಾವಣಾ ಆಯೋಗ ಕೇಂದ್ರ ಸರ್ಕಾರ ಹೇಳಿದ ಹಾಗೆ ಕೇಳುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ಪ್ರಧಾನಿ ಮೋದಿ ಸ್ವತಂತ್ರ ಸಂಸ್ಥೆಗಳನ್ನು ನಾಶ ಮಾಡುವ ಕೆಲಸ ಮಾಡುತ್ತಿದ್ದಾರೆ. ಸ್ವತಂತ್ರ ಸಂಸ್ಥೆಗಳೆಲ್ಲವೂ ಸ್ವತಂತ್ರವಾಗಿ ಕೆಲಸ ಮಾಡುವುದು ಬಿಟ್ಟು ಬಿಜೆಪಿ ಅಡಿಯಾಳಾಗಿ ಕೆಲಸ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಸಂವಿಧಾನ ಉಳಿಸಲು ನಾವು ಸಹಿ ಸಂಗ್ರಹ ಆಂದೋಲನ ಆರಂಭಿಸಿದ್ದೇವೆ. ಪ್ರಜಾಪ್ರಭುತ್ವ ಉಳಿಯಬೇಕು. ಜನರ ಮತದಾನ ಮುಕ್ತ ಹಾಗೂ ಪಾರದರ್ಶಕವಾಗಿರಬೇಕು” ಎಂದರು.


