ರೌಡಿಶೀಟರ್ ಬಿಕ್ಲು ಶಿವ ಕೊಲೆ ಆರೋಪಿ, ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಸಿಐಡಿ ಬಂಧಿಸಿದ್ದರೂ ಅವರು ವಿಚಾರಣೆಗಾಗಿ ಕಸ್ಟಡಿಯಲ್ಲಿ ಇರುವ ಬದಲು ಜಯದೇವ ಆಸ್ಪತ್ರೆಯಲ್ಲಿ ಇದ್ದಾರೆ.
ಆರೋಗ್ಯ ತಪಾಸಣೆ ವೇಳೆ ಇಸಿಜಿಯಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದ್ದು, ಜಯದೇವ ಆಸ್ಪತ್ರೆಯಲ್ಲಿ ಆಂಜಿಯೋಗ್ರಾಂ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಐಸಿಯು ವಾರ್ಡ್ನ ಎ ಬ್ಲಾಕ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಂಜಿಯೋಗ್ರಾಂ ಮತ್ತು ಇತರ ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ವೈದ್ಯರು ನಡೆಸಲಿದ್ದಾರೆ.
ಈಗಾಗಲೇ ಬ್ಲಡ್ ಸ್ಯಾಂಪಲ್ ಪಡೆದಿದ್ದು, ಆಂಜಿಯೋಗ್ರಾಂ ವರದಿ ಬಂದ ಬಳಿಕ ನ್ಯಾಯಧೀಶರ ಮುಂದೆ ಹಾಜರುಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಸ್ಪತ್ರೆಯಲ್ಲಿರೋ ಬಸವರಾಜ್ ಅವರ ಕೊಠಡಿ ಬಳಿ ಸಿಐಡಿಯ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಒಂದು ಟೀಂ ನಿಗಾವಹಿಸಿದೆ. ತಿಲಕ್ ನಗರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಬೇರೆ ಯಾರಿಗೂ ಇಲ್ಲಿಗೆ ಪ್ರವೇಶ ಇಲ್ಲ.
ಕೋರ್ಟ್ನಲ್ಲಿ ವಿಚಾರಣೆಗಾಗಿ 14 ರಿಂದ ಕನಿಷ್ಠ ಐದು ದಿನ ಕಸ್ಟಡಿಗೆ ಕೇಳಲು ಸಿಐಡಿ ಸಿದ್ಧತೆ ನಡೆಸಿದೆ. ಪ್ರಕರಣದ ಆರೋಪಿಗಳಾದ ಅಜಿತ್, ಬೈರತಿ ಬಸವರಾಜ್ ಮತ್ತು ಕೊಲೆಯಾದ ಬಿಕ್ಲು ಶಿವ ಮಧ್ಯೆ ಸಾಕಷ್ಟು ವ್ಯವಹಾರ ಬಗ್ಗೆ ಮಾಹಿತಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ಬೈರತಿ ಬಸವರಾಜ್ ಇಂಡಿಗೋ ವಿಮಾನದಲ್ಲಿ ಅಹಮದಾಬಾದ್ನಿಂದ ಬೆಂಗಳೂರಿಗೆ ಆಗಮಿಸಿದಾಗ ವಿಮಾನ ನಿಲ್ದಾಣದ ಟರ್ಮಿನಲ್ 1 ರಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ವಜಾಗೊಂಡ ಬಳಿಕ ಸುಪ್ರೀಂಕೋರ್ಟ್ಗೆ ಬಸವಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.


