ಭಟ್ಕಳ: ಮೀನುಗಾರಿಕೆ ಮುಗಿಸಿ ವಾಪಾಸ್ ಆಗುತ್ತಿದ್ದ ವೇಳೆ ಬೋಟ್ ಮುಳುಗಡೆಗೊಂಡು ಮೀನುಗಾರರು ಪ್ರಾಣಾಪಾಯದಿಂದ ಪಾರಾದ ಘಟನೆ ಭಟ್ಕಳ ಬಂದರಿನಲ್ಲಿ ನಡೆದಿದೆ. ಬಲೆ ಹಾಗೂ ಸ್ವತ್ತುಗಳು ಸೇರಿದಂತೆ ಬೋಟ್ ಸಹಿತ ಮುಳುಗಡೆಯಾಗಿ ಸುಮಾರು 60 ಲಕ್ಷ ನಷ್ಟ ಸಂಭವಿಸಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾಳೆಹಿತ್ತಲು ಸುರೇಶ ಹಾಗೂ ಪತ್ನಿ ಅಶ್ವಿನಿ ಅವರಿಗೆ ಸೇರಿದ ವಿನಾಶ್ ಬೋಟ್ ಇದಾಗಿದೆ. ಭಟ್ಕಳದ ಮಾವಿನಕುರುವೆ ನಿವಾಸಿ ಉಮೇಶ್ ಮೊಗೇರ ಎಂಬಾತ ಬೋಟ್ನ ಚಾಲಕನಾಗಿದ್ದು, ಈತ ಫೆಬ್ರವರಿ 2ರಂದು ಐದು ಜನ ಮೀನುಗಾರರನ್ನು ಕರೆದುಕೊಂಡು ಮೀನುಗಾರಿಕೆ ಮಾಡುತ್ತಾ ಕುಮಟಾ ವ್ಯಾಪ್ತಿಗೆ ತೆರಳಿದ್ದ.
ಫೆಬ್ರುವರಿ 5 ರಂದು ಬೆಳಿಗ್ಗೆ ಸುಮಾರು 3 ಗಂಟೆಗೆ ಮೀನುಗಾರಿಕೆ ಮುಗಿಸಿ ಪಾಪಾಸ್ ಆಗುತ್ತಿದ್ದ ವೇಳೆ ಕಲ್ಲು ತಗುಲಿದ ಪರಿಣಾಮ ಬೋಟಿನ ಅಡಿಭಾಗ ಒಡೆದು ನೀರು ನುಗ್ಗಿದೆ. ಇದರಿಂದಾಗಿ ಬೋಟು ಮುಳುಗಲಾರಂಭಿಸಿದೆ.
ಇದೇ ಸಂದರ್ಭ ನಾಡದೋಣಿಯಲ್ಲಿದ್ದ ರಾಮಾ ಮೊಗೇರ, ಭರತ್ ಮೊಗೇರ ಸಹಾಯಕ್ಕೆ ಧಾವಿಸಿ, ಐದು ಮಂದಿಯನ್ನು ರಕ್ಷಿಸಲಾಗಿದೆ. ಇನ್ನು ನೋಡ ನೋಡುತ್ತಿದ್ದಂತೆ ಬೋಟ್ ನೀರಿನಲ್ಲಿ ಮುಳುಗಡೆಯಾಗಿದೆ.
ಬೋಟಿನಲ್ಲಿದ್ದ ಬಲೆ, ಪೋಲೋಕ್, ಡೈನಮ್, ಬ್ಯಾಟರಿ, ಗುಂಡು ಸೇರಿದಂತೆ ಅನೇಕ ಸಾಮಗ್ರಿಗಳಿದ್ದು ಸುಮಾರು 50 ರಿಂದ 60 ಲಕ್ಷ ನಷ್ಟವಾಗಿದೆ ಎಂದು ಉಮೇಶ್ ಮೊಗೇರ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.