ಭದ್ರಾ ಬಲದಂಡೆ ನಾಲೆ ಸೀಳಿ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸುವುದನ್ನು ವಿರೋಧಿಸಿ ದಾವಣಗೆರೆ ಬಾಡ ಕ್ರಾಸ್ ಬಳಿ ಭಾರತೀಯ ರೈತ ಒಕ್ಕೂಟ ಹಾಗೂ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಈ ಯೋಜನೆ ವಿರೋಧಿಸಿ ನಿನ್ನೆ ಭದ್ರಾವತಿ ರೈತರು ಪ್ರತಿಭಟನೆ ನಡೆಸಿದ್ದರು.
ಈಗಾಗಲೇ ಭದ್ರಾ ನಾಲಾ ವ್ಯಾಪ್ತಿಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಹೊನ್ನಾಳಿ ಭಾಗದ ರೈತರು, ಅಚ್ಚುಕಟ್ಟು ಕೊನೆಯ ಭಾಗದ ರೈತರು ನೀರು ಹಾಯಿಸಿಕೊಳ್ಳಲು ಕಷ್ಟದ ಪರಿಸ್ಥಿತಿ ಇದೆ. ನಾಲೆ ಸೀಳುವ ಬದಲು ಜಲಾಶಯದ ಸ್ಥಳದಿಂದ ಕೇವಲ 500 ಮೀಟರ್ ದೂರದಲ್ಲಿ ಭದ್ರಾ ನದಿ ಇದ್ದು 365 ದಿನವು ಹರಿವು ಇರುವ ಕಾರಣ ಜಾಕ್ವೆಲ್ ನಿರ್ಮಿಸಿ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಭದ್ರಾ ಅಚ್ಚು ಕಟ್ಟಿನ ರೈತರಿಗೆ ಬೆಳೆ ಬೆಳೆಯಲು ಯಾವುದೇ ತೊಂದರೆ ಇಲ್ಲ ಎಂದು ರೈತರು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಭಾರತೀಯ ರೈತ ಒಕ್ಕೂಟದ ಮುಖಂಡ ನಾಗೇಶ್ವರ್ ರಾವ್ ಅಸ್ವಸ್ಥಗೊಂಡಿದ್ದು, ಪೊಲೀಸರು ಹಾಗೂ ರೈತರು ಪ್ರಥಮ ಚಿಕಿತ್ಸೆ ನೀಡಿ ಉಪಚರಿಸಿದರು. ಕುಡಿಯಲು ನೀರು ಹಾಗೂ ಗಾಳಿ ಬೀಸಿ ಪೊಲೀಸರು ಆರೈಕೆ ಮಾಡಿದರು.
ಯೋಜನೆಯನ್ನು ಕೈ ಬಿಡದಿದ್ದರೆ ಜೂನ್ 28ರಂದು ದಾವಣಗೆರೆ ನಗರ ಬಂದ್ಗೆ ಕರೆ ನೀಡುವುದಾಗಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.