ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಟನಲ್ ರಸ್ತೆ ಅಗತ್ಯವಿದ್ದು, ಈ ಯೋಜನೆಯನ್ನು ಮುಂದುವರಿಸಬೇಕು ಎಂದು ಭಾರತೀಯ ಇಂಜಿನಿಯರ್ ಗಳ ಸಂಸ್ಥೆ (ಐಐಇ) ಡಿಸಿಎಂ ಡಿಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿತು.
ಅಲಿ ಆಸ್ಕರ್ ರಸ್ತೆಯಲ್ಲಿ ಬುಧವಾರ ನಡೆದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕಾರ್ಯಕ್ರಮದ ವೇಳೆ ಭಾರತೀಯ ಇಂಜಿನಿಯರ್ ಗಳ ಸಂಸ್ಥೆ ಕಾರ್ಯದರ್ಶಿ ಎಂ. ಲಕ್ಷ್ಮಣ್ ಹಾಗೂ ಇತರ ಪದಾಧಿಕಾರಿಗಳು ಟನಲ್ ರಸ್ತೆಯಿಂದ ಬೆಂಗಳೂರಿಗೆ ಆಗಲಿರುವ ಅನುಕೂಲತೆಗಳ ಕುರಿತು ವರದಿಯನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಸಲ್ಲಿಸಿದರು.
“ಬೆಂಗಳೂರಿನಲ್ಲಿ ಟನಲ್ ರಸ್ತೆ ನಿರ್ಮಾಣ ಮಾಡಬೇಕು ಎಂಬ ಉಪಮುಖ್ಯಮಂತ್ರಿಗಳ ನಿರ್ಧಾರ ಅತ್ಯುತ್ತಮವಾಗಿದೆ. ಈ ಯೋಜನೆ ಜಾರಿ ಹೊರತಾಗಿ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗಲು ಸಾಧ್ಯವಿಲ್ಲ. ಈ ಟನಲ್ ರಸ್ತೆಗೆ ಬಿಜೆಪಿಯವರು ಹೇಳುತ್ತಿರುವಂತೆ ಪ್ರತಿ ಕಿ.ಮೀ.ಗೆ 1500 ಕೋಟಿ ರೂ. ವೆಚ್ಚವಾಗುವುದಿಲ್ಲ. ಪ್ರತಿ ಕಿ.ಮೀ.ಗೆ ಸುಮಾರು 440 ಕೋಟಿ ವೆಚ್ಚ ತಗುಲಲಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಹಾಗೂ ವಿವಿಧ ಬ್ಯಾಂಕುಗಳಿಂದ ಆರ್ಥಿಕ ನೆರವು ಸಿಗಲಿದೆ. ಈ ವಿಚಾರದಲ್ಲಿ ಭಾರತೀಯ ಇಂಜಿನಿಯರ್ ಗಳ ಸಂಸ್ಥೆ ಸರ್ಕಾರದ ಪರವಾಗಿ ನಿಲ್ಲಲಿದೆ. ಯಾವಾಗಲೇ ಕರೆದರೂ ನಾವು ಸಲಹೆ ನೀಡಲು ಸಿದ್ಧ” ಎಂದು ಲಕ್ಷ್ಮಣ್ ತಿಳಿಸಿದರು.
ಪ್ರತಿಪಕ್ಷ ಬಿಜೆಪಿ ಟನಲ್ ರಸ್ತೆ ವಿರುದ್ಧ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಪ್ರತಿಭಟನೆ ಕೂಡ ನಡೆಸುತ್ತಿದೆ. ಆದರೆ ಭಾರತೀಯ ಇಂಜಿನಿಯರ್ ಗಳ ಸಂಸ್ಥೆ (ಐಐಇ) ಈ ವಿಚಾರದಲ್ಲಿ ರಾಜ್ಯಸರ್ಕಾರವನ್ನು ಬೆಂಬಲಿಸಿ ಯೋಜನೆಯನ್ನು ಮುಂದುವರಿಸಲು ಒತ್ತಾಯಿಸಿದೆ.


