ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ನಟ ದರ್ಶನ್ ಗೆ ವಿದೇಶಕ್ಕೆ ತೆರಳಲು ನ್ಯಾಯಾಲಯ ಅನುಮತಿ ನೀಡಿದೆ. ಈ ಮೂಲಕ ದರ್ಶನ್ ಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.
ಬೆಂಗಳೂರಿನ ಸಿಸಿಎಚ್ 57ನೇ ನ್ಯಾಯಾಲಯ ಜುಲೈ 1ರಿಂದ 27ರವರೆಗೆ ವಿದೇಶಕ್ಕೆ ತೆರಳಲು ಅನುಮತಿ ನೀಡಿದೆ. ಅಲ್ಲದೇ ಮುಂದಿನ ವಿಚಾರಣೆ ವೇಳೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿದೆ.
ವಿದೇಶದಲ್ಲಿ ಚಿತ್ರೀಕರಣ ಬಾಕಿ ಇರುವ ಹಿನ್ನೆಲೆಯಲ್ಲಿ ವಿದೇಶಕ್ಕೆ ತೆರಳಲು ಅನುಮತಿ ಕೋರಿ ದರ್ಶನ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ತೀರ್ಪು ಕಾಯ್ದಿರಿಸಿದ್ದು, ಬುಧವಾರ ಗ್ರೀನ್ ಸಿಗ್ನಲ್ ನೀಡಿದೆ.
ಡೆವಿಲ್ ಸೇರಿದಂತೆ ಹಲವು ಚಿತ್ರಗಳಲ್ಲಿ ಈ ಗಾಗಲೇ ನಟಿಸುತ್ತಿರುವ ದರ್ಶನ್ ವಿದೇಶದಲ್ಲಿ ಚಿತ್ರೀಕರಣ ಬಾಕಿ ಉಳಿದಿದೆ. ಅದರಲ್ಲೂ ಡೆವಿಲ್ ಚಿತ್ರ ಮಲೇಷ್ಯಾದಲ್ಲಿ ಚಿತ್ರೀಕರಣದ ಭಾಗ ನೆನೆಗುದಿಗೆ ಬಿದ್ದಿರುವುದರಿಂದ ಚಿತ್ರೀಕರಣಕ್ಕೆ ಅಡ್ಡಿಯಾಗಿತ್ತು.
ಈಗಾಗಲೇ ನ್ಯಾಯಾಲಯ ದರ್ಶನ್ ದೇಶದ ಯಾವುದೇ ಮೂಲೆಗೆ ಬೇಕಾದರೂ ಪ್ರಯಾಣ ಮಾಡಲು ಅನುಮತಿ ನೀಡಿತ್ತು. ಇದೀಗ ವಿದೇಶಕ್ಕೆ ತೆರಳಲು ಅನುಮತಿ ನೀಡುವ ಮೂಲಕ ದರ್ಶನ್ ಗೆ ಬಹುತೇಕ ದೊಡ್ಡ ರಿಲೀಫ್ ಸಿಕ್ಕಿದಂತಾಗಿದೆ.