ಬೆಂಗಳೂರಿನ ವಿದ್ಯಾರಣ್ಯಪುರದ ಬಾಲಕನೊಬ್ಬ ಸತ್ಯ ಹುಡುಕಲು ಹೋಗುತ್ತಿದ್ದೇನೆ, ನನ್ನನ್ನು ಹುಡುಕಬೇಡಿ ಎಂದು ಪತ್ರ ಬರೆದಿಟ್ಟು ರಾತ್ರಿ ಮನೆ ಬಿಟ್ಟು ಹೋಗಿದ್ದಾನೆ. ಮೋಹಿತ್ ಋಷಿ (17) ನಾಪತ್ತೆಯಾಗಿರುವ ಬಾಲಕ. ಮೋಹಿತ್ ಋಷಿ ಬಿಇಎಲ್ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದನು.
ಜ.16ರಂದು ಬೆಳಗಿನ ಜಾವ 4 ಗಂಟೆಗೆ ಮನೆ ಬಿಟ್ಟು ಹೋಗಿದ್ದಾನೆ. ಮನೆ ಬಿಟ್ಟು ಹೋಗುವ ಮುನ್ನ “ಅಸತ್ಯದ ಪ್ರಪಂಚದಲ್ಲಿ ಸತ್ಯ ಹುಡುಕಲು ಸತ್ಯದ ಪ್ರಪಂಚದ ಕಡೆ ಹೋಗುತ್ತಿದ್ದೇನೆ. ನಾನು ವಿಷ್ಣುವಿನ ಮಗ. ನನ್ನ ಹುಡುಕಲು ಪ್ರಯತ್ನ ಪಡಬೇಡಿ. ಜಗತ್ತಿನ ಜನರ ಕಲ್ಯಾಣಕ್ಕಾಗಿ ದೇವರು ನನ್ನನ್ನು ಆರಿಸಿಕೊಂಡಿದ್ದಾನೆ. ಈ ರಾಜಜೀವನವನ್ನ ತೊರೆದು ಸತ್ಯದ ಪ್ರಪಂಚದ ಕಡೆ ಹೋಗುತ್ತಿದ್ದೇನೆ ” ಎಂದು ಪತ್ರ ಬರೆದಿಟ್ಟು ಮೊಬೈಲ್ ಮನೆಯಲ್ಲೇ ಬಿಟ್ಟು ಹೋಗಿದ್ದಾನೆ.
ಪುತ್ರ ನಾಪತ್ತೆಯಾಗಿರುವ ಬಗ್ಗೆ ಮೋಹಿತ್ ಋಷಿಯ ತಂದೆ ಅರ್ಜುನ್ ಕುಮಾರ್ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಮೋಹಿತ್ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮೋಹಿತ್ ಭಾವಚಿತ್ರವನ್ನು ಪೋಷಕರು ಹಂಚಿಕೊಂಡಿದ್ದು, ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.