Monday, September 22, 2025
Menu

ಬೆಳಗಾವಿ: ಡೆತ್​ನೋಟ್ ಬರೆದಿಟ್ಟು ನರ್ಸಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಎಲ್ಲೆಡೆ ನಾಡಹಬ್ಬ ದಸರಾ (Dasara) ಸಂಭ್ರಮ ಮನೆ ಮಾಡಿದೆ. ಆದ್ರೆ, ನವರಾತ್ರಿಯ ಮೊದಲ ದಿನವೇ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಸುಮಿತ್ರಾ ಗೋಕಾಕ್ (19) ಗೋಕಾಕ್ ತಾಲೂಕಿನ ಘಟಪ್ರಭಾ ಗ್ರಾಮದ ನಿವಾಸಿಯಾಗಿದ್ದು, ಸದಾಶಿವನಗರದ ಅಂಬೇಡ್ಕರ್ ಹಾಸ್ಟೆಲ್ನಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು.

ವರದಿಗಳ ಪ್ರಕಾರ, ಇಂದು (ಸೆಪ್ಟೆಂಬರ್ 22) ಬೆಳಿಗ್ಗೆ ಟಿಫನ್ ತೆಗೆದುಕೊಂಡು ರೂಮ್ ಗೆ ಹೋದವಳು ಹೊರಗಡೆ ಬಂದಿಲ್ಲ. ಸ್ನೇಹಿತರು ಕೊಠಡಿ ಬಳಿ ಬಂದು ಬಾಗಿಲು ಬಡಿದರೂ ಸಹ ಸುಮಿತ್ರಾ ಬಾಗಿಲು ತೆರೆದಿಲ್ಲ. ಬಳಿಕ ಬಾಗಿಲು ಮುರಿದು ಪರಿಶಿಲನೆ ನಡೆಸಿದಾಗ ಸುಮಿತ್ರಾ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.

ಹಾಸ್ಟೆಲ್ ಕೊಠಡಿಯ ಬಾಗಿಲು ತೆರೆಯುತ್ತಿದ್ದಂತೆಯೇ ಒಳಗೆ ನೇಣು ಬಿಗಿದುಕೊಂಡಿದ್ದ ಸುಮಿತ್ರಾಳನ್ನು ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. “25 ಸಾವಿರ ರೂ. ಸಾಲ ಮಾಡಿ ಮಗಳನ್ನು ಕಾಲೇಜಿಗೆ ಸೇರಿಸಿದ್ದೆ. ನನ್ನ ಮಗಳಿಗೆ ಏನಾಯಿತು ಹೇಳಿ…” ಎಂದು ತಂದೆ ದುಂಡಪ್ಪ ಅವರು ವಾರ್ಡನ್ ಕಾಲಿಗೆ ಬಿದ್ದು ಗೋಳಾಡಿದರು. ಈ ನಡುವೆ ಆತ್ಮಹತ್ಯೆ ನಡೆದ ಕೊಠಡಿಯಲ್ಲಿ ಪೊಲೀಸರು ತಪಾಸಣೆ ನಡೆಸಿದರು.

ಹಾಸ್ಟೆಲ್ ರೂಮಿನಲ್ಲಿ ಡೆತ್ ನೋಟ್ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಠಡಿಯ ತಪಾಸಣೆಯಲ್ಲಿ ಡೆತ್ ನೊಟ್ ಪತ್ತೆಯಾಗಿದ್ದು, “ನನ್ನ ಸಾವಿಗೆ ನಾನೇ ಕಾರಣ” ಎಂದು ಅವಳು ಬರೆದಿದ್ದಾಳೆ.

ಪೊಲೀಸರು ಮೃತದೇಹವನ್ನು ಬಿಮ್ಸ್ ಶವಾಗಾರಕ್ಕೆ ಸ್ಥಳಾಂತರ ಮಾಡಿದ್ದು, ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related Posts

Leave a Reply

Your email address will not be published. Required fields are marked *