Menu

ಬಸವನಬಾಗೇವಾಡಿಯಲ್ಲಿ ವಾಮಾಚಾರ ನಡೆಸಿ ಬ್ಯಾಂಕ್‌ ದರೋಡೆ

ಬ್ಯಾಂಕ್ ಬಾಗಿಲಿನ ಬೀಗ ಮುರಿದು ಕಿಟಕಿಯ ಬಾರ್​ಗಳನ್ನು ತುಂಡರಿಸಿ ಒಳಗೆ ನುಗ್ಗಿದ ಕಳ್ಳರು ಮೊದಲು ವಾಮಾಚಾರ ಮಾಡಿ ಹಣ ಮತ್ತು ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿರುವ ಘಟನೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿರುವ ರಾಷ್ಟ್ರೀಕೃತ ಕೆನರಾ ಬ್ಯಾಂಕ್​ನಲ್ಲಿ ನಡೆದಿದೆ.
ಮರುದಿನ ಬ್ಯಾಂಕ್​ನಲ್ಲಿ ಕಸಗೂಡಿಸಲು ಬಂದಾಗ ಕಪ್ಪು ಬಟ್ಟೆಯಿಂದ ಸುತ್ತಿದ್ದ ಗೊಂಬೆ, ನಿಂಬೆ ಹಣ್ಣು, ಕುಂಕುಮ ಹಾಗೂ ಇತರ ವಸ್ತುಗಳು ಸಿಕ್ಕಿವೆ.ಬ್ಯಾಂಕ್​ನಲ್ಲಿದ್ದ ಹಣ ಮತ್ತು ಚಿನ್ನಾಭರಣ ದೋಚಿರುವುದು ಬೆಳಕಿಗೆ ಬಂದಿದೆ.

ಮನಗೂಳಿ ಠಾಣೆ ಪೊಲೀಸರು, ಬ್ಯಾಂಕ್​ನ ವ್ಯವಸ್ಥಾಪಕ ನಿರ್ದೇಶಕರು, ಸಿಬ್ಬಂದಿ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಬೆರಳಚ್ಚು ತಂಡ ಪರಿಶೀಲನೆ ನಡೆಸಿದೆ. ಕೆನರಾ ಬ್ಯಾಂಕ್​​ನ ಹಿರಿಯ ಅಧಿಕಾರಿಗಳು ಆಗಮಿಸಿ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಎಷ್ಟು ಹಣ ಮತ್ತು ಚಿನ್ನಾಭರಣ ಕಳ್ಳತನವಾಗಿದೆ ಎಂಬುವುದಕ್ಕೆ ನಿಖರ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ.

ಬ್ಯಾಂಕ್ ಒಳಗೆ ನುಗ್ಗಿರುವ ಕಳ್ಳರು ಸೈರನ್ ಮೊಳಗದಂತೆ ಮಾಡಿದ್ದು, ಸಿಸಿ ಕ್ಯಾಮೆರಾಗಳ ಹಾರ್ಡ್ ಡ್ರೈವ್ ತೆಗೆದುಕೊಂಡು ಹೋಗಿದ್ದಾರೆ. ಮನಗೂಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಪ್ರಮುಖ ಭಾಗಗಳಲ್ಲಿ 35 ಸಿಸಿ ಕ್ಯಾಮೆರಾಗಳಿದ್ದು, ಪೊಲೀಸರು ಪರಿಶೀಲಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಹಾಗೂ ಇತರ ರಸ್ತೆಗಳಲ್ಲಿನ ಸಿಸಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲನಾ ಕಾರ್ಯ ನಡೆದಿದೆ. ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಕಳ್ಳತನವಾಗಿದೆ ಎನ್ನಲಾಗಿದೆ.

Related Posts

Leave a Reply

Your email address will not be published. Required fields are marked *