Menu

ಚಾಂಪಿಯನ್ಸ್ ಟ್ರೋಫಿ: ಭಾರತ -ಬಾಂಗ್ಲಾದೇಶ ಮುಖಾಮುಖಿ ಇಂದು

ತವರಿನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಹುಮ್ಮಸ್ಸಿನಲ್ಲಿರುವ ಭಾರತವು ಬಾಂಗ್ಲಾದೇಶ ವಿರುದ್ಧ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ 20ರಂದು ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ದುಬೈನ  ಇಂಟರ್‌ ನ್ಯಾಷನಲ್‌ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ.

ಐಸಿಸಿ ಏಕದಿನ ಪ್ರಶಸ್ತಿಗಾಗಿ 12 ವರ್ಷಗಳ ಬರವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ರೋಹಿತ್ ಶರ್ಮಾ ನೇತೃತ್ವದ ತಂಡವು ಟೂರ್ನಿ ಗೆಲ್ಲಲು ನೆಚ್ಚಿನ ತಂಡವಾಗಿ ಪ್ರವೇಶಿಸಲಿದೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ರೋಹಿತ್ ಶರ್ಮಾ ಮತ್ತು ಅವರ ತಂಡ ಇಂಗ್ಲೆಂಡ್ ತಂಡವನ್ನು ವೈಟ್ವಾಶ್ ಮಾಡುವ ಮೂಲಕ ದೊಡ್ಡ ಹೇಳಿಕೆ ನೀಡಿದೆ. ಏಕದಿನ ಕಿರೀಟಕ್ಕಾಗಿ ಬೇಟೆಯ ಮುನ್ನ ಭಾರತದ ಭರ್ಜರಿ ಗೆಲುವು ಎದುರಾಳಿಗಳಿಗೆ ದೊಡ್ಡ ಎಚ್ಚರಿಕೆಯಾಗಿದೆ.

ಬೆನ್ನುನೋವಿನಿಂದಾಗಿ ತಂಡದಿಂದ ಹೊರಗುಳಿದಿರುವ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯು ಭಾರತ ತಂಡಕ್ಕೆ ದೊಡ್ಡ ಕೊರತೆಯಾಗಿ ಕಾಡಲಿದೆ. ಇತ್ತೀಚಿನ ದಿನಗಳಲ್ಲಿ ಬುಮ್ರಾ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದರು, ಕಳೆದ ವರ್ಷ ಭಾರತದ ಟಿ೨೦ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಬುಮ್ರಾ ಅನುಪಸ್ಥಿತಿಯಲ್ಲಿ ಭಾರತೀಯ ವೇಗದ ದಾಳಿಯನ್ನು ಮುನ್ನಡೆಸುವ ಜವಾಬ್ದಾರಿಯು ದೀರ್ಘಕಾಲದ ಗಾಯದ ನಂತರ ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿರುವ ಮೊಹಮ್ಮದ್ ಶಮಿ ಅವರ ಹೆಗಲ ಮೇಲಿದೆ. ಶಮಿಯನ್ನು ಬೆಂಬಲಿಸಲು, ಆಯ್ಕೆದಾರರು ಯುವ ಆಟಗಾರರಾದ ಅರ್ಷ್ದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಅವರ ಮೇಲೆ ನಂಬಿಕೆ ಇಟ್ಟಿದ್ದಾರೆ. ಭಾರತ ತಂಡದಲ್ಲಿ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ಎಂಬ ಐವರು ಸ್ಪಿನ್ನರ್‌ಗಳನ್ನು  ಆಯ್ಕೆ ಮಾಡಲಾಗಿದೆ.

ಯುವ ಬ್ಯಾಟ್ಸ್ ಮನ್ ಗಳಿಗೆ ಹೊಣೆ: ಶುಬ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಶ್ರೀಮಂತ ಫಾರ್ಮ್ ಹಿರಿಯ ಜೋಡಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೇಲಿನ ಅವಲಂಬನೆಯನ್ನು ತಗ್ಗಿಸಿದೆ. ಕೆಳ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಉಪಸ್ಥಿತಿಯು ಹೆಚ್ಚು ಅಗತ್ಯವಾದ ಫೈರ್ಪವರ್ ನೀಡುತ್ತದೆ ಮತ್ತು ಜಡೇಜಾ ಮತ್ತು ಪಟೇಲ್ ಅವರ ಸೇರ್ಪಡೆಯು ಬ್ಯಾಟಿಂಗ್ ಆಳವನ್ನು ಮತ್ತಷ್ಟು ಬಲಪಡಿಸುತ್ತದೆ.

ವಿಕೆಟ್ ಕೀಪರ್ ಬ್ಯಾಟರ್ ಆಗಿ ರಾಹುಲ್ ಬಗ್ಗೆ ಕೋಚ್ ಗೌತಮ್ ಗಂಭೀರ್ ಪ್ರಬಲವಾದ ವಾದ ಮಂಡಿಸಿರುವ ಕಾರಣ ಕಡೆಯ ಪಕ್ಷ ಮೊದಲ ಪಂದ್ಯಕ್ಕೆ ರಿಶಬ್ ಪಂತ್ ಬೆಂಚ್ ಕಾಯಿಸುವುದು ಖಚಿತವಾಗಿದೆ. ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಅರ್ಷ್ದೀಪ್ ಸಿಂಗ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ.
ಬಾಂಗ್ಲಾದೇಶ ತಂಡ: ಸೌಮ್ಯ ಸರ್ಕಾರ್, ತಂಜಿದ್ ಹಸನ್, ನಜ್ಮುಲ್ ಹುಸೇನ್ ಶಾಂಟೊ, ಮುಷ್ಫಿಕರ್ ರಹೀಮ್, ಜಾಕರ್ ಅಲಿ (ವಿಕೆ), ತೌಹಿದ್ ಹೃದೋಯ್, ಮಹಮುದುಲ್ಲಾ, ಮೆಹಿದಿ ಹಸನ್ ಮಿರಾಜ್, ರಿಷದ್ ಹುಸೇನ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರಹಮಾನ್.

Related Posts

Leave a Reply

Your email address will not be published. Required fields are marked *