Menu

ರಾಜ್ಯದ ತೋತಾಪುರಿಗೆ ಚಿತ್ತೂರಿನಲ್ಲಿ ನಿಷೇಧ: ವಾಪಸ್‌ ಪಡೆಯಲು ಆಂಧ್ರಪ್ರದೇಶ ಸಿಎಂಗೆ ಸಿದ್ದರಾಮಯ್ಯ ಪತ್ರ

ರಾಜ್ಯದ ತೋತಾಪುರಿ ಮಾವು ಖರೀದಿ ನಿಷೇಧಿಸಿ  ಚಿತ್ತೂರು ಜಿಲ್ಲಾಡಳಿತ ಹೊರಡಿಸಿದ್ದ ಆದೇಶ ವಾಪಸ್‌ ಪಡೆದು ಇಲ್ಲಿನ ಮಾವು ಕೃಷಿಕರಿಗೆ ನೆರವಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.

ಚಿತ್ತೂರು ಜಿಲ್ಲಾಡಳಿತ ಹೊರಡಿಸಿರುವ ನಿಷೇಧ ಆದೇಶದಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್​ ಆಂಧ್ರಪ್ರದೇಶ ಸರ್ಕಾರಕ್ಕೆ ಪತ್ರ ಬರೆದು, ನಿಷೇಧ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಈಗ ಖುದ್ದು ಸಿಎಂ ಕರ್ನಾಟಕದ ರೈತರ ನೆರವಿಗಾಗಿ ಚಿತ್ತೂರು ಜಿಲ್ಲಾಡಳಿತವು ಕರ್ನಾಟಕದ ತೋತಾಪುರಿ ಮಾವು ಖರೀದಿ ಮೇಲೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಬೇಕು ಎಂದು ಚಂದ್ರಬಾಬು ನಾಯ್ಡುಗೆ ಮನವಿ ಮಾಡಿದ್ದಾರೆ.

ಬೇರೆ ರಾಜ್ಯಗಳಿಂದ ತೋತಾಪುರಿ ಮಾವಿನ ಹಣ್ಣುಗಳನ್ನು ಜಿಲ್ಲೆಗೆ ಪ್ರವೇಶಿಸುವುದನ್ನು ನಿಷೇಧಿಸಿ ಚಿತ್ತೂರು ಜಿಲ್ಲಾಧಿಕಾರಿಗಳು ಜೂನ್ 07 ರಂದು ಆದೇಶ ಹೊರಡಿಸಿದ್ದರು. ಇದರಿಂದ ಕರ್ನಾಟಕದ ಮಾವು ಬೆಳೆಗಾರರಿಗೆ, ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ಗಣನೀಯ ಪ್ರಮಾಣದಲ್ಲಿ ತೋತಾಪುರಿ ಮಾವನ್ನು ಬೆಳೆಯುವವರಿಗೆ ತೊಂದರೆಯಾಗಿದೆ. ಈ ರೈತರು ಮಾವು ಮಾರಾಟ ಮಾಡಲು ಚಿತ್ತೂರು ಸಂಸ್ಕರಣಾ ಘಟಕಗಳೊಂದಿಗೆ  ಸಂಪರ್ಕ ಹೊಂದಿದ್ದಾರೆ. ನಿಷೇಧ ಆದೇಶವು ಪೂರೈಕೆ ಸರಪಳಿ ವ್ಯವಸ್ಥೆಗೆ ತೊಡಕಾಗಿದೆ ಮತ್ತು ಕೊಯ್ಲಿನ ನಂತರದ ಗಮನಾರ್ಹ ನಷ್ಟಕ್ಕೆ ದಾರಿಯಾಗಿದೆ. ಸಾವಿರಾರು ರೈತರ ಜೀವನೋ ಪಾಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಪತ್ರದಲ್ಲಿ ಸಿದ್ದರಾಮಯ್ಯ ವಿವರಿಸಿದ್ದಾರೆ.

ಪೂರ್ವ ಸಮಾಲೋಚನೆ ಅಥವಾ ಸಮನ್ವಯವಿಲ್ಲದ ಈ ರೀತಿಯ ಕ್ರಮ ಸಹಕಾರಿ ಒಕ್ಕೂಟ ವ್ಯವಸ್ಥೆಯ ಮನೋಭಾವಕ್ಕೆ ವಿರುದ್ಧವಾಗಿವೆ. ಇದು ಉದ್ವಿಗ್ನತೆ ಮತ್ತು ಪ್ರತೀಕಾರದ ಕ್ರಮಗಳಿಗೆ ಕಾರಣವಾಗಬಹುದು.  ತರಕಾರಿಗಳು ಮತ್ತು ಇತರ ಕೃಷಿ ಸರಕುಗಳ ಅಂತರ-ರಾಜ್ಯ ಸಾಗಣೆಯನ್ನು ಅಡ್ಡಿಪಡಿಸಬಹುದು. ನೀವು ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸುತ್ತೇನೆ ಮತ್ತು ಚಿತ್ತೂರು ಜಿಲ್ಲಾಡಳಿತದ ಆದೇಶವನ್ನು ರದ್ದುಗೊಳಿಸಲು ಅಗತ್ಯ ನಿರ್ದೇಶನ ನೀಡಬೇಕೆಂದು ವಿನಂತಿ ಸುತ್ತೇನೆ ಎಂದು ಸಿಎಂ ಬರೆದಿದ್ದಾರೆ.

ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ರೈತರ ಕಲ್ಯಾಣದ ಹಿತದೃಷ್ಟಿಯಿಂದ ಕೃಷಿ ಉತ್ಪನ್ನಗಳ ಸರಾಗ ಸಾಗಣೆಯನ್ನು ಪುನಃಸ್ಥಾಪಿಸಲು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Related Posts

Leave a Reply

Your email address will not be published. Required fields are marked *