ಸಣ್ಣ ವ್ಯಾಪಾರಿಗಳಿಗೆ ತೆರಿಗೆ ಪಾವತಿಸುವಂತೆ ನೀಡಿರುವ ನೋಟಿಸ್ ಹಿಂಪಡೆಯದಿದ್ದರೆ ಜು.23 ರಿಂದ ಎರಡು ದಿನ ರಾಜ್ಯವ್ಯಾಪಿ ಹಾಲು, ಬೇಕರಿ ಉತ್ಪನ್ನ ಮಾರಾಟ ಬಂದ್ ಮಾಡಲಾಗುವುದು. ಜು.25 ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಎಚ್ಚರಿಸಿದೆ.
ಕಾರ್ಮಿಕ ಪರಿಷತ್ ಅಧ್ಯಕ್ಷ ರವಿಶೆಟ್ಟಿ ಬೈಂದೂರು ಮಾತನಾಡಿ, ಎಲ್ಲ ಸಣ್ಣ ವ್ಯಾಪಾರಿ, ಅಂಗಡಿಗಳ ಮಾಲೀಕರು ಜು.23, 24ರಂದು ಹಾಲು, ಬೇಕರಿ ಉತ್ಪನ್ನ, ಬೀಡಿ, ಸಿಗರೇಟು ಮಾರಾಟ ಬಂದ್ ಮಾಡಲಿದ್ದಾರೆ. ಕಾರ್ಮಿಕರು ಕಪ್ಪುಪಟ್ಟಿ ಧರಿಸಿ ಹಾಲು, ಕಾಫಿ, ಚಹಾ, ಬೇಕರಿ ಉತ್ಪನ್ನ ಮಾರಾಟ ಮಾಡದಿರಲು ನಿರ್ಧರಿಸಿರುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಯುಪಿಐ ಬಳಕೆ ಮೂಲಕ ಡಿಜಿಟಲ್ ವಹಿವಾಟಿನ ಯಶಸ್ಸಿಗೆ ಕಾರಣರಾದ ಸಣ್ಣ ವ್ಯಾಪಾರಿಗಳನ್ನು ಶೋಷಣೆ ಮಾಡಲಾಗುತ್ತಿದೆ. ಹಣ್ಣು, ತರಕಾರಿ, ಹೂವಿನ ಮಾರಾಟ ಮಾಡುವವರಿಗೆ ತೆರಿಗೆ ನೋಟಿಸ್ ನೀಡಬಾರದು ಎಂಬ ನಿಯಮ ಇದ್ದರೂ ಅದನ್ನು ಉಲ್ಲಂಘಿಸಿ ನೋಟಿಸ್ ನೀಡಲಾಗಿದೆ. ರಾಜ್ಯದ ಬಿಜೆಪಿಗರಿಗೆ ಸಣ್ಣ ವ್ಯಾಪಾರಿಗಳ ಮೇಲೆ ಗೌರವ ಇದ್ದರೆ ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆ ತಮಗೆ ಬೇಡ ಎಂದು ಹೇಳಿಸಲಿ. ಕೇಂದ್ರ ಸರ್ಕಾರ ಸಣ್ಣ ಉದ್ದಿಮೆದಾರರ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.