ಯಾವ ಒಬ್ಬ ಆಶಾ ಕಾರ್ಯಕರ್ತೆಯರನ್ನು ವಜಾಗೊಳಿಸುವುದಿಲ್ಲ. ಈ ಬಗ್ಗೆ ಆರೋಗ್ಯ ಸಚಿವರೊಂದಿಗೆ ನಾನು ಮಾತನಾಡುವೆ. ಒಂದು ವೇಳೆ ಅನ್ಯಾಯವಾದರೆ ನಿಮ್ಮನ್ನು ಕರೆದುಕೊಂಡು ನೇರವಾಗಿ ಸಿಎಂ ಅವರ ಬಳಿಗೆ ಹೋಗುತ್ತೇನೆ ಮತ್ತು ನಿಮ್ಮ ಜೊತೆಗೆ ನ್ಯಾಯ ಕೊಡಿಸಲು ಹೋರಾಡುತ್ತೇನೆ. ಆದ್ದರಿಂದ ನಿರಾತಂಕವಾಗಿರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.
ಧಾರವಾಡದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ತರ್ಕಭದ್ಧಗೊಳಿಸುವಿಕೆ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರನ್ನು ವಜಾಗೊಳಿಸುವ ನೀತಿಯ ವಿರುದ್ಧ ಅನಿರ್ದಿಷ್ಟಾವಧಿ ಹೋರಾಟದ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒ ಮತ್ತು ಮುಖಂಡರ ಸಮ್ಮುಖ ಚರ್ಚಿಸಿ ಈ ಭರವಸೆ ನೀಡಿದರು.
ಜಿಲ್ಲಾ ಅಧ್ಯಕ್ಷ ಭವನ ಬಳ್ಳಾರಿ ಮಾತನಾಡಿ, ಯಾರನ್ನು ವಜಾ ಗೊಳಿಸದಿರುವಂತೆ ಅಭಯ ನೀಡಿದ ಹಿನ್ನೆಲೆಯಲ್ಲಿ ಇಂದು ಆಶಾ ಕಾರ್ಯಕರ್ತೆಯರ ಹೋರಾಟ ಯಶಸ್ವಿಯಾಗಿದೆ. ನಾಳೆಯಿಂದ ಜಿಲ್ಲೆಯ ಆಶಾ ಕಾರ್ಯಕರ್ತೆಯರು ಎಂದಿನಂತೆ ತಮ್ಮ ಕ್ಷೇತ್ರಗಳಲ್ಲಿ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೆ ಎಂದು ಹೇಳಿದರು.
ನಿಯೋಗದಲ್ಲಿ ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷರು ಗಂಗಾಧರ ಬಡಿಗೇರ್, ಆಶಾ ಮುಖಂಡರಾದ ಮಂಜುಳಾ ಗಾಡಗೋಳಿ, ಶೋಭಾ ಹಿರೇಮಠ, ರಾಜೇಶ್ವರಿ ಕೋರಿ, ಶೋಭಾ ಸಂತಬಾನವರ, ರತ್ನಾ ಕುಂದಗೋಳ, ನಂದಾ ದೊಡಮನಿ, ಸುಮಂಗಲ ಕೌದೆನ್ನವರ, ಶೈಲಾ ಮುದುಗಲ್ , ಭಾರತಿ ಶೆಟ್ಟರ್, ರೇಣುಕಾ ಬೋಗಾರ್ ಮತ್ತಿತರರು ಇದ್ದರು.
ಧಾರವಾಡ ಜಿಲ್ಲೆಯಲ್ಲಿ ಸುರಿದ ಭಾರಿ ಅಕಾಲಿಕ ಮಳೆಯಿಂದ ಹಾಗೂ ಆಲಿಕಲ್ಲು ಗಳಿಂದ ರೈತರಿಗೆ ಉಂಟಾದ ಹಾನಿಯ ಕುರಿತಂತೆ ಸಭೆ ನಡೆಸಲಾಯಿತು. ಸಂತೋಷ್ ಲಾಡ್ ಸಭೆಯಲ್ಲಿ ಭಾಗವಹಿಸಿದ್ದರು. ಮಳೆಯಿಂದ ಉಂಟಾದ ಹಾನಿಗೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಕುಡಿಯುವ ನೀರಿನ ಅಭಾವ ಮತ್ತು ಪೂರೈಕೆ ಕುರಿತು ಸಭೆ ನಡೆಸಿ ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್, ಪೊಲೀಸ್ ಆಯುಕ್ತ ಶ್ರೀ ಎನ್ ಶಶಿಕುಮಾರ್, ಜಿಲ್ಲಾ ಪಂಚಾಯತ್ ಸಿಇಒ ಶ್ರೀ ಭುವನೇಶ್ ಪಾಟೀಲ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


