Menu

ಅಕ್ರಮ ಸಂಬಂಧಕ್ಕೆ ಅಡ್ಡಿ: ಗಂಡ ಹಾಗೂ ಕುಟುಂಬಕ್ಕೆ ವಿಷ ಹಾಕಿದಾಕೆ ಅರೆಸ್ಟ್‌

ಹಾಸನದ ಬೇಲೂರು ತಾಲೂಕಿನ ಕೆರಳೂರು ಗ್ರಾಮದಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಗಂಡ ಮತ್ತು ಮನೆಯ ವರಿಗೆಲ್ಲ ವಿಷ ಹಾಕಿ ಕೊಲ್ಲಲು ಯತ್ನಿಸಿದ ಮಹಿಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ. ಕೆರಳೂರು ಗ್ರಾಮದ ಗಜೇಂದ್ರ ಹಾಗೂ ಅವರ ಕುಟುಂಬನ್ನು ಕೊಲ್ಲಲು ಯತ್ನಿಸಿದ್ದ ಚೈತ್ರಾಳನ್ನು ಪೊಲೀಸರು ಬಂಧಿಸಿದ್ದಾರೆ.

11 ವರ್ಷದ ಹಿಂದೆ ಗಜೇಂದ್ರ ಹಾಗೂ ಚೈತ್ರಾ ಮದುವೆಯಾಗಿದ್ದು, ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮೂರು ವರ್ಷಗಳಿಂದ ಸಣ್ಣ-ಪುಟ್ಟ ವಿಚಾರಕ್ಕೂ ಚೈತ್ರಾ ಗಂಡನೊಂದಿಗೆ ಜಗಳವಾಡುತ್ತಿದ್ದಳು. ಈ ನಡುವೆ ಆಕೆಗೆ ಪುನೀತ್ ಎಂಬಾತ ಪರಿಚಯವಾಗಿದ್ದು ಇಬ್ಬರಲ್ಲೂ ಸಲುಗೆ ಬೆಳೆದಿತ್ತು.

ಪುನೀತ್ ಜೊತೆಗೆ ಚೈತ್ರಾ ಅನೈತಿಕ ಸಂಬಂಧದ ಬಗ್ಗೆ ಮಾಹಿತಿ ಪಡೆದ ಪತಿ ಗಜೇಂದ್ರ ಈ ವಿಚಾರವನ್ನು ಚೈತ್ರಾಳ ತಂದೆ-ತಾಯಿಗೆ ತಿಳಿಸಿದ್ದರು. ಕುಟುಂಬಸ್ಥರು ರಾಜಿ ಪಂಚಾಯಿತಿ ಮಾಡಿ ಸಮಸ್ಯೆ ಬಗೆ ಹರಿಸಿದ್ದರು.

ಆದರೆ ಚೈತ್ರಾ ಕೆಲವು ದಿನಗಳ ಹಿಂದೆ ಅದೇ ಗ್ರಾಮದ ಶಿವು ಎಂಬಾತನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಳು. ವಿಷಯ ಕುಟುಂಬದವರಿಗೆ ತಿಳಿದರೆ ಸಮಸ್ಯೆ ಆಗುತ್ತದೆ ಎಂದು ಗಂಡ, ಮಕ್ಕಳು, ಅತ್ತೆ-ಮಾವ ಅವರನ್ನು ಕೊಲ್ಲಲು ಸಂಚು ರೂಪಿಸಿದಳು. ಯಾರಿಗೂ ತಿಳಿಯದಂತೆ ಅವರಿಗೆಲ್ಲ ಊಟ-ತಿಂಡಿಯಲ್ಲಿ ವಿಷದ ಮಾತ್ರೆಗಳನ್ನು ಹಾಕುತ್ತಿದ್ದಳು. ಇದಕ್ಕೆ ಶಿವು ಸಹಕಾರ ನೀಡಿದ್ದ. ವಿಷಯ ಗೊತ್ತಾದ ಗಜೇಂದ್ರ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಬಂದು ಆಹಾರವನ್ನು ವಶಕ್ಕೆ ಪಡೆದು ಚೈತ್ರಾಳನ್ನು ವಿಚಾರಣೆಗೊಳಪಡಿಸಿದಾಗ ಪ್ರಕರಣ ದೃಢಪಟ್ಟಿದೆ. ಬೇಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿಚಾರಣೆ ಮುಂದುವರಿಸಿದ್ದಾರೆ.

Related Posts

Leave a Reply

Your email address will not be published. Required fields are marked *