ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ತೀವ್ರಗೊಂಡಿದ್ದು, ಕ್ಷಿಪಣಿದಾಳಿ- ಪ್ರತಿದಾಳಿ ಮುಂದುವರಿದಿದೆ. ಎರಡೂ ದೇಶಗಳಲ್ಲೂ ಉದ್ವಿಗ್ಣ ಸ್ಥಿತಿ ನಿರ್ಮಾಣ ಗೊಂಡಿದೆ. ಕರ್ನಾಟಕದ 9 ವಿದ್ಯಾರ್ಥಿಗಳು ಇರಾನ್ನಲ್ಲಿ ಸಿಲುಕಿಕೊಂಡಿದ್ದಾರೆ.
ಇರಾನ್ ರಾಜಧಾನಿ ಟೆಹರಾನ್ನ ಜಫ್ರಾನಿಯಾ ಪ್ರದೇಶದ ತೌಫಿಕ್ ಅಲ್ಲೆಯಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ 9 ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವಂತೆ ಕರ್ನಾಟಕ ನಾನ್ ರೆಸಿಡೆನ್ಸಿ ಪೋರಂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಪೋರಂನ ಡೆಪ್ಯುಟಿ ಚೇರ್ಮನ್ ಡಾ. ಆರತಿ ಕೃಷ್ಣ ವಿದೇಶಾಂಗ ಸಚಿವ ಜೈಶಂಕರ್ ಪತ್ರ ಬರೆದು ಮನವಿ ಮಾಡಿದ್ದಾರೆ.
ಭಾರತಕ್ಕೆ ಮರಳಲು ಸಹಾಯ ಮಾಡುವಂತೆ ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ವಿದೇಶಾಂಗ ಸಚಿವಾಲಯದ ಕಚೇರಿಗೆ ಕರ್ನಾಟಕದ ವಿದ್ಯಾರ್ಥಿಗಳಾದ ನದೀಮ್ ಹುಸೇನ್, ಮೀರ್ ನಾಸರ್ ಹುಸೇನ್, ಸೈಯದ್ ಮೊಹಮ್ಮದ್ ಟಕಿ, ಮೀರ್ ಎಸಾಮ್ ರೆಜಾ, ಅಬ್ಬಾಸ್ ಅಸ್ಕರಿ, ಸೈಯದ್ ಮೊಹ್ಸಿನ್ ರೆಜಾ, ಮರ್ಯಮ್ ಫಾತಿಮಾ, ಡೇನಿಯಾ ಉಲ್ಫಾಟ್, ಅಬ್ಬಾಸ್ ಅಲಿ ಮನವಿ ಮಾಡಿದ್ದಾರೆ.