ಬೆಂಗಳೂರು: ಬಾಲ್ಯವಿವಾಹ ತಡೆಗಟ್ಟುವ ಹಾಗೂ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ಹತ್ತಿಕ್ಕುವ ಉದ್ದೇಶದಿಂದ ರಚಿಸಲಾಗಿರುವ ಅಕ್ಕ ಪಡೆಗೆ ರಾಜ್ಯದಲ್ಲಿ ಇದೇ 19 ರಂದು ಚಾಲನೆ ನೀಡಲಾಗುತ್ತದೆ.
ಈ ಹಿನ್ನಲೆಯಲ್ಲಿ ಪೂರ್ವಭಾವಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಂಗಳವಾರ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ತಾಲ್ಲೂಕು ಮಟ್ಟದಲ್ಲಿ ಈ ಕಾರ್ಯ ಪಡೆಗಳನ್ನು ರಚಿಸಲಾಗುತ್ತಿದ್ದು, ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಕಿರುಕುಳವನ್ನು ಹತ್ತಿಕ್ಕುವ ಗುರಿ ಹೊಂದಿದೆ.ಮಹಿಳೆಯರು ಮತ್ತು ಮಕ್ಕಳು ದೌರ್ಜನ್ಯಕ್ಕೆ ತುತ್ತಾದ ಸಂದರ್ಭದಲ್ಲಿ ತತ್ಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ಈ ಪಡೆಗಳನ್ನು ರೂಪಿಸಲಾಗಿದೆ.
ಮಹಿಳಾ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ಎನ್.ಸಿ.ಸಿ.ಯ ಕೆಡೆಟ್ಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಕಾರ್ಯ ಪಡೆಯಲ್ಲಿರಲ್ಲಿದ್ದಾರೆ. ಪೊಲೀಸ್ ಇಲಾಖೆಯ ಮಾದರಿಯಲ್ಲಿ ಪ್ರತ್ಯೇಕ ಗಸ್ತು ವಾಹನಗಳನ್ನು ಈ ಪಡೆಗಾಗಿ ನಿಯೋಜಿಸಲಾಗಿದೆ. ಬಸ್ ನಿಲ್ದಾಣ, ಶಾಲಾ ಕಾಲೇಜು, ಮಾರುಕಟ್ಟೆ ಹಾಗೂ ಇತರ ಜನ ಸಂದಣಿ ಪ್ರದೇಶಗಳಲ್ಲಿ ಗಸ್ತು ವಾಹನಗಳನ್ನು ನಿಯೋಜಿಸಲಾಗುತ್ತದೆ.
ಬಾಲ್ಯ ವಿವಾಹ ತಡೆ ಹಾಗೂ ಫೋಕ್ಸೊ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾಯ್ದೆಯ ಈ ಪಡೆಯ ಮೂಲ ಉದ್ದೇಶವಾಗಿದೆ.2023ರಲ್ಲಿ ಬೀದರ್ನಲ್ಲಿ ಪ್ರಾಯೋಗಿಕವಾಗಿ ಅಕ್ಕ ಪಡೆ ಕೆಲಸ ನಿರ್ವಹಿಸಿತ್ತು. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದ ಬಳಿಕ ಮತ್ತಷ್ಟು ವಿಚಾರಣೆ ಮಾಡಲು ನಿರ್ಧರಿಸಲಾಗಿತ್ತು. ಇದೇ ವರ್ಷದ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮೈಸೂರು, ಬೆಳಗಾವಿ, ಮಂಗಳೂರು ಜಿಲ್ಲೆಗಳಲ್ಲಿ 2ನೇ ಹಂತದ ಪ್ರಾಯೋಗಿಕ ಪಡೆಗಳನ್ನು ಆರಂಭಿಸಲಾಗಿತ್ತು.
ಇತ್ತೀಚೆಗೆ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಕಾರ್ಯ ಪಡೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಿರ್ಣಯ ಕೈಗೊಂಡಿದ್ದರು. ಅದರಂತೆ ನವೆಂಬರ್ 19 ರಂದು ಅಕ್ಕ ಕಾರ್ಯಪಡೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಪೂರ್ವ ಭಾವಿಯಾಗಿ ಪೊಲೀಸ್ ಇಲಾಖೆಯ ಸಹಕಾರ ಪಡೆಯಲು ಮತ್ತು ಕಾರ್ಯಪಡೆಗಳನ್ನು ಮತ್ತಷ್ಟು ಪರಿಣಾಮಕಾರಿಯನ್ನಾಗಿಸುವ ನಿಟ್ಟಿನಲ್ಲಿ ಸಚಿವದ್ವಯರು ಚರ್ಚೆ ನಡೆಸಿದ್ದಾರೆ.


