ಹೊಸೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಸಂಬಂಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮನವಿಯನ್ನು ರಕ್ಷಣಾ ಸಚಿವಾಲಯ ಮತ್ತೊಮ್ಮೆ ತಿರಸ್ಕರಿಸಿದೆ.
ವಾಯುಪ್ರದೇಶವನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ನಿಯಂತ್ರಿಸುತ್ತದೆ. ಹೀಗಾಗಿ ಹೊಸೂರು ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಪ್ರಮುಖ ಅನುಮತಿಗಳಲ್ಲಿ ಒಂದು ರಕ್ಷಣಾ ಸಚಿವಾಲಯದಿಂದ ಬರಬೇಕು. ಆದರೆ ಅದು ಅನುಮತಿ ನಿರಾಕರಿಸಿದೆ.
ಕಳೆದ ವರ್ಷ ಜೂನ್ನಲ್ಲಿ, ತಮಿಳುನಾಡು ಸರ್ಕಾರವು ವಿಮಾನ ನಿಲ್ದಾಣವನ್ನು ಸ್ಥಾಪಿಸಲು ಅಗತ್ಯ ವಾಯುಪ್ರದೇಶಕ್ಕಾಗಿ ಸಚಿವಾಲಯವನ್ನು ಕೇಳಿತ್ತು. ನವೆಂಬರ್ನಲ್ಲಿ ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ, ಹೆಚ್ಎಎಲ್ ಕಾರ್ಯಾ ಚರಣೆಗೆ ಯಾವುದೇ ಅಡಚಣೆಯಿಲ್ಲದೆ ಹೊಸೂರಿನಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸುವುದು ಹೇಗೆ ಸಾಧ್ಯ ಎಂಬುದನ್ನು ಉಲ್ಲೇಖಿಸಿ ಪ್ರತಿಕ್ರಿಯೆಯನ್ನು ಸಲ್ಲಿಸಿದ್ದರು.
ಆದರೆ.ಚರ್ಚೆ ನಡೆಸದೆಯೇ ಮನವಿ ನಿರಾಕರಿಸಿರುವುದು ನಿರಾಶಾದಾಯಕ. ತಮಿಳುನಾಡು ಸರ್ಕಾರ ಮತ್ತು ರಕ್ಷಣಾ ಸಚಿವಾಲಯದ ನಡುವೆ ಸಭೆ ನಡೆದಿದ್ದರೆವಿವರಿಸಲು ಅವಕಾಶ ಸಿಗುತ್ತಿತ್ತು ಎಂದು ಸರ್ಕಾರದ ಮೂಲಗಳು ಹೇಳಿವೆ.
ಶೂಲಗಿರಿ ತಾಲೂಕಿನಲ್ಲಿ 30 ಮಿಲಿಯನ್ ಪ್ರಯಾಣಿಕರ ಸಾಮರ್ಥ್ಯದೊಂದಿಗೆ ಹೊಸೂರಿನಲ್ಲಿ ನಿರ್ಮಿಸಲು ಉದ್ದೇಶಿಸಲಾದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು 2,300 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುವ ನಿರೀಕ್ಷೆಯಿದೆ. ಹೊಸೂರು ವಿಮಾನ ನಿಲ್ದಾಣಕ್ಕೆ ಸ್ಥಳ ಅನುಮತಿ ದೊರೆತ ನಂತರ, ಟಿಡ್ಕೊ ನಾಗರಿಕ ವಿಮಾನಯಾನ ಸಚಿವಾಲಯದಿಂದ ತಾತ್ವಿಕ ಅನುಮೋದನೆ ಪಡೆಯಲಿದೆ.


