ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಬೇಕು. ಪ್ರತಿ ವರ್ಷ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಮಾಡಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಕೆಂಪೇಗೌಡ ಜಯಂತಿ ಅಂಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ನಾಡಪ್ರಭು ಕೆಂಪೇಗೌಡ ಪ್ರತಿಮೆ, ಬಿಬಿಎಂಪಿ ಕಚೇರಿ ಮುಂಭಾಗದ ಪ್ರತಿಮೆ ಹಾಗೂ ವಿಧಾನಸೌಧ ಆವರಣದಲ್ಲಿರುವ ಪ್ರತಿಮೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮಾತನಾಡಿದ ಅವರು, ಕೆಂಪೇಗೌಡರು ಬೆಂಗಳೂರು ಕಟ್ಟದಿದ್ದರೆ, ನಾವು ನೀವು ಇಲ್ಲಿ ಇರುತ್ತಿರಲಿಲ್ಲ. ಇಲ್ಲಿನ ವಾತಾವರಣ ಮನಗಂಡು ಕೆಂಪೇಗೌಡರು ಈ ನಗರ ಕಟ್ಟಿದ ಪರಿಣಾಮ ರಾಜ್ಯ, ದೇಶ ಹಾಗೂ ವಿದೇಶಗಳ ಜನ ಇಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಈ ಹಿಂದಿನ ಸರ್ಕಾರದಲ್ಲಿ ಈ ಪ್ರತಿಮೆ ನಿರ್ಮಾಣ ಮಾಡಿದಾಗ ನಾನು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಪ್ರಾರಂಭಿಸಿದಾಗ, ಯೋಜನಾ ಪ್ರಾಧಿಕಾರ, ನಕ್ಷೆ ಸೇರಿದಂತೆ ಅನೇಕ ತೀರ್ಮಾನ ಮಾಡಿದ್ದೆ. ಆಗ ನಗರಾಭಿವೃದ್ಧಿ ಸಚಿವನಾಗಿ ನಾನು ಹಾಕಿದ ಕೊನೆ ಸಹಿ ಈ ವಿಮಾನ ನಿಲ್ದಾಣ ಎಂದು ಮೆಲುಕು ಹಾಕಿದರು.
ಕೆಂಪೇಗೌಡ ಜಯಂತಿ ಅಂಗವಾಗಿ ನಿಮ್ಮೆಲ್ಲರಿಗೂ ಅಭಿನಂದನೆಗಳು. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದಿಂದ ನೀಡುವ ಕೆಂಪೇಗೌಡ ಪ್ರಶಸ್ತಿಗೆ ಈ ವರ್ಷ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೂ ಲಭಿಸಿದೆ. ಪ್ರಾಧಿಕಾರಕ್ಕೆ ಅಭಿನಂದನೆಗಳು ಎಂದು ತಿಳಿಸಿದರು.
ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ಕೆಂಪೇಗೌಡ ಥೀಮ್ ಪಾರ್ಕ್ ವಿಚಾರವಾಗಿ ಕೇಳಿದಾಗ, ಈ ಯೋಜನೆ ಜವಾಬ್ದಾರಿ ಯನ್ನು ಕೃಷ್ಣ ಭೈರೇಗೌಡ ಅವರು ವಹಿಸಿಕೊಂಡಿದ್ದಾರೆ. ಈ ಯೋಜನೆಗೆ ಅನುದಾನ ಸಿಕ್ಕಿರಲಿಲ್ಲ. ಈಗ ಅದನ್ನು ಸರಿಪಡಿಸಲಾಗಿದ್ದು, ಮುಂದಿನ 3-4 ತಿಂಗಳಲ್ಲಿ ಅಂತಿಮ ರೂಪ ನೀಡಲಾಗುವುದು ಎಂದು ತಿಳಿಸಿದರು.
ಬಿಬಿಎಂಪಿ ಕಚೇರಿ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಕೆಂಪೇಗೌಡ ಜಯಂತಿ ಆಚರಣೆ ಆರಂಭಿಸಿದ್ದು ನಾವೇ, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದು ನಾವೇ, ಇದಕ್ಕೆ 5 ಎಕರೆ ಜಾಗವನ್ನು ನೀಡಿದ್ದೇವೆ ಎಂದರು.
ಸೆಪ್ಟೆಂಬರ್ ನಲ್ಲಿ ಕ್ರಾಂತಿಯಾಗಲಿದೆ, ಸರ್ಕಾರದಲ್ಲಿ ಪವರ್ ಸೆಂಟರ್ ಜಾಸ್ತಿಯಾಗಿವೆ ಎಂಬ ಸಚಿವ ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, ನನಗೆ ಈ ವಿಚಾರ ಗೊತ್ತಿಲ್ಲ. ನೀವು ಅವರನ್ನೇ ಕೇಳಿ. ನಾವು ಅವರ ಜೊತೆ ಚರ್ಚೆ ಮಾಡಿದ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದು ತಿಳಿಸಿದರು.