ಇರಾನ್- ಇಸ್ರೇಲ್ ಸಂಘರ್ಷದ ಭಾಗವಾಗಿ ಪಶ್ಚಿಮ ಏಷ್ಯಾ ಹೊತ್ತಿ ಉರಿಯುತ್ತಿರುವ ಕಾರಣ ಏರ್ ಇಂಡಿಯಾ ಮೇ 31 ರವರೆಗೆ ಇಸ್ರೇಲ್ಗೆ ವಿಮಾನಗಳನ್ನು ಸ್ಥಗಿತಗೊಳಿಸಿದೆ. ನವದೆಹಲಿ-ಟೆಲ್ ಅವೀವ್ ಮಾರ್ಗದಲ್ಲಿ ಮೇ 31 ರವರೆಗೆ ವಿಮಾನಯಾನವನ್ನು ಏರ್ ಲೈನ್ಸ್ ಸ್ಥಗಿತಗೊಳಿಸಿದೆ ಎಂದು ಏರ್ ಇಂಡಿಯಾ ಕಾರ್ಯನಿರ್ವಾಹಕರು ಮಾಹಿತಿ ನೀಡಿದ್ದಾರೆ.
ಎಲ್ ಅಲ್ ಇಸ್ರಾಏರ್, ಅರ್ಕಿಯಾ ಮತ್ತು ಏರ್ ಹೈಫಾದಂತಹ ಇಸ್ರೇಲ್ ವಿಮಾನಗಳು ಮಾತ್ರ ತೀವ್ರ ನಿರ್ಬಂಧಗಳ ಅಡಿ ಕಾರ್ಯನಿರ್ವಹಿಸುತ್ತವೆ. ಹೆಚ್ಚಿನ ಪ್ರಮುಖ ವಿಮಾನಯಾನ ಸಂಸ್ಥೆಗಳು ಟೆಲ್ ಅವಿವ್ ಮಾರ್ಗದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ.
ವೈಯಕ್ತಿಕ ಅಥವಾ ವೃತ್ತಿಪರ ಕಾರಣಗಳಿಗಾಗಿ ಅಥವಾ ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದ ಪಾರಾಗಲು ಭಾರತಕ್ಕೆ ಬರಲು ಬಯಸುತ್ತಿರುವ ಇಸ್ರೇಲ್ನಲ್ಲಿ ವಾಸಿಸುವ 40,000 ಕ್ಕೂ ಹೆಚ್ಚು ಭಾರತೀಯರಲ್ಲಿ ವಿಮಾನಗಳ ಸ್ಥಗಿತ ಆತಂಕ ಹುಟ್ಟಿಸಿದೆ. ಇಸ್ರೇಲ್ ತೊರೆಯಲು ಬಯಸುವ ಭಾರತೀಯರು ಜೋರ್ಡಾನ್ ಅಥವಾ ಈಜಿಪ್ಟ್ ಮೂಲಕ ಎರಡು ದೇಶಗಳ ಭೂ ಗಡಿ ದಾಟುವ ಮೂಲಕ ಪ್ರವೇಶಿಸಬೇಕು. ಟೆಲ್ ಅವೀವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತಕ್ಕೆ ತೆರಳಲು ನೆರವು ನೀಡುತ್ತಿದೆ.ರಾಯಭಾರ ಕಚೇರಿ ಭಾರತೀಯ ಸಮುದಾಯದೊಂದಿಗೆ ನಿಯಮಿತ ಸಂಪರ್ಕ ಹೊಂದಿದ್ದು, ತುರ್ತು ಸಹಾಯವಾಣಿ ತೆರೆದಿದೆ, ನೋಂದಣಿ ಕಾರ್ಯವನ್ನು ಪ್ರಾರಂಭಿಸಿದೆ.
ರಾಯಭಾರಿ ಜೆಪಿ ಸಿಂಗ್ ಮತ್ತು ರಾಯಭಾರ ಕಚೇರಿ ತಂಡ ಇಸ್ರೇಲ್ನಾದ್ಯಂತ ಭಾರತೀಯ ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ಸಮಸ್ಯೆ ಆಲಿಸಲು ವರ್ಚುವಲ್ ಚರ್ಚೆ ನಡೆಸಿತು. ಬಿಕ್ಕಟ್ಟಿನ ಸಂದರ್ಭದಲ್ಲಿ ಮತ್ತು ಅದರಾಚೆಗೂ ದೆಹಲಿ ಮತ್ತು ಟೆಲ್ ಅವಿವ್ ನಡುವಿನ ನೇರ ವಿಮಾನ ಸೇವೆಯನ್ನು ಜನವರಿ 1 ರಂದು ಮರು ಪ್ರಾರಂಭಿಸಿದರೂ ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡಿದಾಗಿನಿಂದ ವಿಮಾನಗಳು ಅಸ್ತವ್ಯಸ್ತಗೊಂಡಿವೆ.


