ಅಹಮದಾಬಾದ್: ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 270 ಮಂದಿ ಏರ್ ಇಂಡಿಯಾ ದುರಂತದಲ್ಲಿ ಮೃತಪಟ್ಟಿರುವ ಶಂಕೆ ಇದೆ.
ಗುರುವಾರ ಮಧ್ಯಾಹ್ನ ಅಹಮದಾಬಾದ್ ನಿಂದ ಲಂಡನ್ ಪ್ರಯಾಣ ಬೆಳೆಸುತ್ತಿದ್ದ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಮೆಕಾನಿ ನಗರದ ಕಟ್ಟಡದ ಮೇಲೆ ಸ್ಫೋಟಗೊಂಡು ಪತನಗೊಂಡಿದೆ.
ವಿಮಾನದಲ್ಲಿ 242 ಪ್ರಯಾಣಿಕರು ಇದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದ್ದು, ಅಧಿಕೃತ ಹೇಳಿಕೆಯಷ್ಟೇ ಬಾಕಿ ಇದೆ. ವಿಮಾನ ಪತನಗೊಂಡಿದ್ದರಿಂದ ಸ್ಥಳೀಯ ಹಲವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಮಾನ ಮೆಘಾನಿ ನಗರದ ಮೆಡಿಕಲ್ ವಿದ್ಯಾರ್ಥಿಗಳ ಹಾಸ್ಟೇಲ್ ಮೇಲೆ ಬಿದ್ದಿದ್ದು, ಕನಿಷ್ಠ 30 ಮಂದಿ ಮೃತಪಟ್ಟಿರುವ ಶಂಕೆ ಇದೆ. ವಿಮಾನ ಮೂರು ಬಹು ಅಂತಸ್ತಿನ ಕಟ್ಟಡಗಳಿಗೆ ಬಡಿದು ಪತನಗೊಂಡಿರುವುದರಿಂದ ಎಷ್ಟು ಜನ ಸತ್ತಿದ್ದಾರೆ ಎಂದು ಊಹಿಸುವುದು ಕೂಡ ಕಷ್ಟವಾಗಿದೆ.
ವಿಮಾನದಲ್ಲಿ ಇಬ್ಬರು ಪೈಲೆಟ್, 10 ಕ್ಯಾಬಿನ್ ಸಿಬ್ಬಂದಿ, 52 ಬ್ರಿಟಿಷ್ ಪ್ರಜೆಗಳು, 6 ಪೋರ್ಚುಗಲ್ ಹಾಗೂ ಒಬ್ಬರು ಕೆನಡಾ ಪ್ರಜೆ 169 ಭಾರತೀಯ ಪ್ರಯಾಣಿಕರು ಇದ್ದರು ಎಂದು ಹೇಳಲಾಗಿದೆ.
ವಿಮಾನದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಸೇರಿದಂತೆ ಕೆಲವು ಅಧಿಕಾರಿಗಳು ಹಾಗೂ ಹಲವು ಕುಟುಂಬಗಳು ಒಟ್ಟಿಗೆ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ. ವಿಮಾನ ನಿಲ್ದಾಣದಿಂದ ಟೇಕಾಫ್ ಆದ 5 ನಿಮಿಷದಲ್ಲೇ ಕೇವಲ 625 ಅಡಿ ಎತ್ತರದಲ್ಲೇ ಏರ್ ಇಂಡಿಯಾದ ಬೋಯಿಂಗ್ 787-8 ವಿಮಾನ ಸಂಪರ್ಕ ಕಳೆದುಕೊಂಡಿದೆ.
ವಿಮಾನ ಪತನದಿಂದ ವಿಮಾನದಲ್ಲಿ ಯಾರೂ ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆ ಇದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. 6 ಎನ್ ಡಿಆರ್ ಎಫ್ ತುಕಡಿ ಹಾಗೂ 7 ಅಗ್ನಿಶಾಮಕ ದಳಗಳು ಪರಿಹಾರ ಕಾರ್ಯದಲ್ಲಿ ತೊಡಗಿವೆ.
ವಿಮಾನದ ಹಿಂದಿನ ರೆಕ್ಕೆ ಮರಕ್ಕೆ ಬಡಿದಿದೆ ಎಂದು ಹೇಳಲಾಗಿದ್ದರೂ ವಿಮಾನ ಹಾರಾಟ ಆರಂಭಿಸಿದ 5 ನಿಮಿಷದಲ್ಲೇ ಸಂಪರ್ಕ ಕಡಿದುಕೊಂಡಿದೆ. ವಿಮಾನ ಹಾರಾಟಕ್ಕೂ ಮುನ್ನ ಪೈಲೆಟ್ ಸುಮಿತ್ ಸಬರ್ವಾಲ್ ವಿಮಾನದಲ್ಲಿ ತಾಂತ್ರಿಕ ದೋಷ ಇರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಎಂದು ಹೇಳಲಾಗಿದೆ.
ಏರ್ ಇಂಡಿಯಾದ ಬೋಯಿಂಗ್ 787-8 ವಿಮಾನ ಮಧ್ಯಾಹ್ನ 1.17 ನಿಮಿಷಕ್ಕೆ ಹೊರಟ್ಟಿತ್ತು. ಮರಕ್ಕೆ ಬಡಿದ ಕೂಡಲೇ ವಿಮಾನ ಪತನಗೊಂಡಿದೆ. ವಿಮಾನ ಪತನಗೊಳ್ಳುತ್ತಿದ್ದಂತೆ ದಟ್ಟ ಹೊಗೆ ಆವರಿಸಿಕೊಂಡಿದ್ದು, ಕಿ.ಮೀ. ದೂರದಲ್ಲಿಯೂ ಕಾಣಿಸುತ್ತಿತ್ತು.
ದುರಂತದ ಬೆನ್ನಲ್ಲೇ ಅಹಮದಾಬಾದ್ ವಿಮಾನ ನಿಲ್ದಾಣ ಸ್ಥಗಿತಗೊಳಿಸಲಾಗಿದ್ದು, ಎಲ್ಲಾ ವಿಮಾನಗಳ ಹಾರಾಟ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.