ದಾವಣಗೆರೆಯಲ್ಲಿ ಜನರಿಗೆ ಸರ್ಕಾರಿ ನೌಕರಿ ಕೊಡಿಸುವ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ವಂಚಿಸಿದ್ದ ಶ್ರೀನಾಥ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಮೂಲದ ಶ್ರೀನಾಥ್ ರಾಜಕೀಯ ನಾಯಕನ ಸೋಗಿನಲ್ಲಿ ಕೆಲವು ವರ್ಷಗಳಿಂದ ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳಿಗೆ ಮೋಸ ಮಾಡಿದ್ದಾನೆ ಎನ್ನಲಾಗಿದೆ.
ಜಲಸಂಪನ್ಮೂಲ ಇಲಾಖೆಯಲ್ಲಿ ಡಿ ದರ್ಜೆ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ ಪ್ರತಿ ವ್ಯಕ್ತಿಯಿಂದ ಮೂರರಿಂದ ನಾಲ್ಕು ಲಕ್ಷ ರೂಪಾಯಿವರೆಗೆ ಎಗರಿಸಿದ್ದಾನೆ ಎಂದು ಹೇಳಲಾಗುತ್ತಿದೆ. ನಾಗರಾಜ್ ಎಂಬವರು ಮಗನಿಗೆ ಅಟೆಂಡರ್ ಹುದ್ದೆಗಾಗಿ ಮೂರುವರೆ ಲಕ್ಷ ರೂಪಾಯಿ ನೀಡಿದ್ದು, ಶ್ರೀನಾಥ್ ನಕಲಿ ನೇಮಕಾತಿ ಪತ್ರ ಮತ್ತು ಸರ್ಕಾರಿ ಸೀಲ್ಗಳನ್ನು ಬಳಸಿ ವಂಚಿಸಿದ್ದ.
ಬೆಂಗಳೂರಿನ ಜಲಸಂಪನ್ಮೂಲ ಕಚೇರಿಗೆ ತೆರಳಿದಾಗ ಮೋಸ ಹೋಗಿರುವುದು ನಾಗರಾಜ್ ಅವರಿಗೆ ಗೊತ್ತಾಗಿದೆ. ನಾಗರಾಜ್ ಹಾಗೂ ಇತರ ಸಂತ್ರಸ್ತರು ಶ್ರೀನಾಥ್ನನ್ನು ದಾವಣಗೆರೆ ಕೆಟಿಜೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಆರೋಪಿಯು ಹಲವು ಮಂದಿಗೆ ಇದೇ ರೀತಿ ವಂಚಿಸಿರುವ ಅನುಮಾನ ವ್ಯಕ್ತವಾಗಿದೆ.


