Menu

60 ಗ್ರಾಂ ಚಿನ್ನ ಕದ್ದಿದ್ದಕ್ಕಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ಬರ್ಬರ ಹತ್ಯೆ

mysore news

ಚಿನ್ನದ ಸರ ಕದ್ದ ದುಡ್ಡಿನಿಂದ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆ ಬ್ಯಾಡರಪುರದ ಮೋಹನ್ ಕುಮಾರ್ (31) ಕೊಲೆಯಾದ ಯುವಕ. 60 ಗ್ರಾಂ ಚಿನ್ನಕ್ಕಾಗಿ ಯುವಕನನ್ನು ಕಾರಿನಲ್ಲೇ ಹೊಡೆದು ಹತ್ಯೆ ಮಾಡಿದ ಆರೋಪಿಗಳು ಶವ ಸುಟ್ಟು ಹಾಕಿದ್ದರು. ಅಪರಿಚಿತ ವ್ಯಕ್ತಿ ಶವ ಸುಟ್ಟ ಕೇಸ್ ಅನ್ನು ಮೈಸೂರು ಜಿಲ್ಲಾ ಪೊಲೀಸರು ಬೇಧಿಸಿದ್ದಾರೆ. ಏ.18 ರಂದು ನಡೆದಿದ್ದ ಕೊಲೆ ಕೇಸ್‌ನಲ್ಲಿ ಒಟ್ಟು 4 ಆರೋಪಿಗಳ ಬಂಧನವಾಗಿದ್ದು, ಪ್ರಮುಖ ಆರೋಪಿ ಎಸ್ಕೇಪ್ ಆಗಿದ್ದಾನೆ.

ಮೈಸೂರು ಮೂಲದ ಶ್ರೀನಿವಾಸ್ ಪ್ರಮುಖ ಆರೋಪಿ. ಮೋಹನ್ ಕುಮಾರ್ ಕೊಲೆ ಕೇಸ್‌ನಲ್ಲಿ ಪ್ರಜ್ವಲ್, ಚಂದು, ಕಬೀರ್ ಕಾಳಯ್ಯ, ದರ್ಶನ್ ಬಂಧನವಾಗಿದೆ. ಹತ್ಯೆಯಾದ ಮೋಹನ್ ಕುಮಾರ್ ಬೋಗಾದಿ ಲಾಡ್ಜ್ ಒಂದರಲ್ಲಿ ಮ್ಯಾನೇಜರ್ ಆಗಿದ್ದ. ಲಾಡ್ಜ್ನಲ್ಲಿ ಇಸ್ಪೀಟ್ ಆಟವಾಡಲು ಕೊಲೆ ಆರೋಪಿ ಶ್ರೀನಿವಾಸ್ ಬರುತ್ತಿದ್ದ. ಶ್ರೀನಿವಾಸ್ ಜೂಜಿಗಾಗಿ ಪತ್ನಿಯ 60 ಗ್ರಾಂ ಚಿನ್ನದ ಸರ ತಂದಿದ್ದ. ಅವತ್ತು ಹುಣ್ಣಿಮೆ ಕಾರಣ ಮಾರವಾಡಿ ಅಂಗಡಿಯವನು ಗಿರವಿ ಇಟ್ಟುಕೊಳ್ಳಲ್ಲ ಎಂದಿದ್ದ.

ಶ್ರೀನಿವಾಸ್ ಲಾಡ್ಜ್ನ ರೂಂನ ಹಾಸಿಗೆ ದಿಂಬಿನ ಕೆಳಗೆ ಚಿನ್ನದ ಸರ ಇಟ್ಟಿದ್ದ. ಇದೇ ವೇಳೆ ಮೋಹನ್ ಕುಮಾರ್ ಚಿನ್ನದ ಸರ ಕಳವು ಮಾಡಿದ್ದ. ಬಳಿಕ ಸ್ವಗ್ರಾಮ ಬ್ಯಾಡರಪುರಕ್ಕೆ ಹೋಗಿ ಕದ್ದ ಚಿನ್ನದ ಸರ ಗಿರವಿ ಇಟ್ಟು ನಿಶ್ಚಿತಾರ್ಥ ಮಾಡಿಕೊಂಡಿದ್ದ. ಈ ಬಗ್ಗೆ ಸರಸ್ವತಿ ಪುರಂ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಆರೋಪಿ ಶ್ರೀನಿವಾಸ್ ತನ್ನ ಗೆಳೆಯರ ಗ್ಯಾಂಗ್ ಕಟ್ಟಿಕೊಂಡು ಮೋಹನ್ ಕುಮಾರ್ ನನ್ನು ಮನೆಯಿಂದ ಕರೆಸಿ ಕಾರಿನಲ್ಲಿ ಕರೆದೊಯ್ದು ಹತ್ಯೆ ಮಾಡಿದ್ದ. ಬಳಿಕ ಯಾರಿಗೂ ತಿಳಿಯದಂತೆ ಮೈಸೂರು ತಾಲೂಕಿನ ಗುಮಚನಹಳ್ಳಿ ಬಳಿ ಹಾಡಹಗಲೇ ಶವ ಸುಟ್ಟುಹಾಕಿ ಆರೋಪಿಗಳು ಎಸ್ಕೇಪ್ ಆಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಜಯಪುರ ಠಾಣೆ ಪೊಲೀಸರು ತನಿಖೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.

Related Posts

Leave a Reply

Your email address will not be published. Required fields are marked *