ದೊಡ್ಡಬಳ್ಳಾಪುರ ನಗರದ ಜಾಲಪ್ಪ ಕಾಲೇಜು ರಸ್ತೆಯ ಅಶ್ವತ್ಥಪ್ಪನವರ ಮನೆ ಬಳಿ ಗೃಹಪ್ರವೇಶದ ಅಡುಗೆ ಕೆಲಸಕ್ಕೆ ಬಂದಿದ್ದ ಬಾಲಕ ಮೃತಪಟ್ಟಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗಂಗರೇ ಕಾಲುವೆ ನಿವಾಸಿ ಹೇಮಂತ (17)ಮೃತ ಬಾಲಕ. ಶಾಮಿಯಾನ ಬಿಚ್ಚಲು ಹೋಗಿ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ವಿದ್ಯುತ್ ಸ್ಪರ್ಶಿಸಿದ ಕೂಡಲೇ ಮೇಲಿನಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಅಸು ನೀಗಿದ್ದಾನೆಂದು ಪೋಷಕರು ಹೇಳಿದ್ದು, ಬಾಲಕಾರ್ಮಿಕನನ್ನು ಕೆಲಸಕ್ಕೆ ಕರೆದುಕೊಂಡ ಗುತ್ತಿಗೆದಾರ ಗಂಗರಾಜು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಿಸಲಾಗಿದೆ, ಮಗನ ಸಾವಿಗೆ ನ್ಯಾಯ ಕೊಡಿಸಿಲ್ಲ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಮತ್ತೆ ಪೋಷಕರು ದೂರು ನೀಡಿದ್ದಾರೆ.
ಶವ ಪರೀಕ್ಷೆ ವರದಿ ಬಂದ ನಂತರ ಪರಿಶೀಲಿಸುವುದಾಗಿ ಗ್ರಾಮಾಂತರ ಪೊಲೀಸರ ಭರವಸೆ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ಘಟನೆ ನಡೆದಿದೆ.