ಮಾತೃತ್ವದ ರಜೆ ಮಹಿಳೆಯರ ಸಾಂವಿಧಾನಿಕ ಹಕ್ಕು ಆಗಿರುವುದರಿಂದ 3ನೇ ಮಗುವಿನ ಹೆರಿಗೆ, ಲಾಲನೆ ಪಾಲನೆ ಸಂದರ್ಭದಲ್ಲೂ ಅದನ್ನು ನೀಡಬೇಕು, ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ.
ತಮಿಳುನಾಡಿನಲ್ಲಿ ಜನಸಂಖ್ಯೆ ನಿಯಂತ್ರಣದ ದೃಷ್ಟಿಯಿಂದ 2 ಮಕ್ಕಳಿಗೆ ಮಾತ್ರ ಮಾತೃತ್ವದ ರಜೆ ನೀಡಲಾಗುತ್ತದೆ. ಸರ್ಕಾರಿ ಶಿಕ್ಷಕಿಯೊಬ್ಬರಿಗೆ 3ನೇ ಮಗುವಿಗೆ ಮಾತೃತ್ವ ರಜೆ ನೀಡಬೇಕು ಎಂದು ಆದೇಶಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿತ್ತು. ಆ ಆದೇಶವನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ಶಿಕ್ಷಕಿಯ 3ನೇ ಮಗು 2ನೇ ಮದುವೆಯಿಂದ ಆಗಿರುವುದನ್ನು ಗಮನಿಸಿರುವ ನ್ಯಾ। ಅಭಯ್ ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠ, ಮಹಿಳೆಯರ ಮಕ್ಕಳ ಆಯ್ಕೆಯಲ್ಲಿ ರಾಜ್ಯದ ಅನಗತ್ಯ ಹಸ್ತಕ್ಷೇಪ ಇರಬಾರದು. ಅವರ ಭಾವನಾತ್ಮಕ ಮತ್ತು ದೈಹಿಕ ಯೋಗಕ್ಷೇಮಕ್ಕೆ ಅಡ್ಡಿಯಾಗುವುದರಿಂದ ಮಹಿಳೆಯರ ಘನತೆಗೆ ಹಾನಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಮಹಿಳೆಯರು ಉದ್ಯೋಗ ಕ್ಷೇತ್ರದ ಗಣನೀಯ ಭಾಗ, ಅವರನ್ನು ಗೌರವ ಮತ್ತು ಘನತೆಯಿಂದ ನಡೆಸಿಕೊಳ್ಳಬೇಕು. ಸ್ತ್ರೀಯರಿಗೆ ಸಾಮಾಜಿಕ ನ್ಯಾಯ ಒದಗಿಸಲು, ಹೆರಿಗೆ ಸಮಯದಲ್ಲಿ ಕುಂದಿದ ಶಕ್ತಿಯನ್ನು ಮರುಪೂರಣಗೊಳಿಸಲು, ಮಗುವಿನ ಪಾಲನೆ ಮಾಡಲು, ಕೆಲಸದ ವಿಷಯದಲ್ಲಿ ತಮ್ಮ ದಕ್ಷತೆಯನ್ನು ಹಿಂದಿನಂತೆ ಕಾಯ್ದುಕೊಳ್ಳಲು ಅನುವು ಮಾಡಿಕೊಡಲು ಮಾತೃತ್ವ ರಜೆ ನೀಡಲಾಗುತ್ತದೆ ಎಂದು ಹೇಳಿದೆ.
ನ್ಯಾ। ಬಿ.ವಿ.ನಾಗರತ್ನ ಕೊಲಿಜಿಯಂ ಸದಸ್ಯರಾಗಿ ನೇಮಕ
ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ಗೆ ನ್ಯಾಯಾಧೀಶರ ನೇಮಕಕ್ಕೆ ಶಿಫಾರಸು ಮಾಡುವ ಸಮಿತಿಯಾಗಿರುವ ಕೊಲಿಜಿಂಗೆ ಸುಪ್ರೀಂ ಕೋರ್ಟ್ನ 5ನೇ ಹಿರಿಯ ನ್ಯಾಯಾಧೀಶರಾಗಿರುವ ನ್ಯಾ। ನಾಗರತ್ನ ಮೇ 25 ರಿಂದ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಅವರು 2027ರ ಆ.29ರಂದು ನಿವೃತ್ತರಾಗಲಿದ್ದು, ಅಲ್ಲಿವರೆಗೆ ಕೊಲಿಜಿಯಂನಲ್ಲಿ ಇರಲಿದ್ದಾರೆ. ನಿವೃತ್ತಿಗೂ ಮೊದಲು 2027ರ ಸೆ.23ರಿಂದ ಅವರಿಗೆ ಸುಪ್ರೀಂ ಸಿಜೆಐ ಆಗುವ ಅವಕಾಶವಿದೆ. ಈ ಮೂಲಕ ಅವರು ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಾಮೂರ್ತಿಯಾಗಲಿದ್ದಾರೆ.