ಬೆಂಗಳೂರು: ಕಾಂಗ್ರೆಸ್ಸಿಗರು ಗುಲ್ಬರ್ಗದಲ್ಲಿ ಗೂಂಡಾಗಿರಿ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಕ್ಷೇಪಿಸಿದ್ದಾರೆ.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರ ನಿಯೋಗವು ಇಂದು ಮಾನ್ಯ ರಾಜ್ಯಪಾಲರನ್ನು ಭೇಟಿ ಮಾಡಿತ್ತು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿನ್ನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಗುಲ್ಬರ್ಗದಲ್ಲಿ ಸರಕಾರದ ವಿರುದ್ಧ ಚಾರ್ಜ್ಶೀಟ್ ಸಂಬಂಧ ಪತ್ರಿಕಾಗೋಷ್ಠಿ ಮಾಡಿದ್ದರು. ಅವರ ಕಾರಿನ ಮೇಲೆ ಮೊಟ್ಟೆ ಒಡೆದಿದ್ದಾರೆ. ಶಾಯಿಯನ್ನು ಕಾರಿನ ಮೇಲೆ ಹಾಕಿದ್ದಾರೆ. ಬಾ ನೋಡಿಕೊಳ್ತೇವೆ; ಮುಗಿಸ್ತೀವೆ ಎಂಬ ಆವಾಜ್ ಹಾಕಿದ್ದಾರೆ ಎಂದು ಆಕ್ಷೇಪಿಸಿದರು.
ಕೆಲಸ ಮಾಡದೆ ಇದ್ದ ಸರಕಾರವÀನ್ನು ತರಾಟೆಗೆ ತೆಗೆದುಕೊಳ್ಳುವುದು ವಿಪಕ್ಷವಾದ ನಮ್ಮ ಕರ್ತವ್ಯ. ಹಿಂದೆ ಸಿ.ಟಿ.ರವಿ ಅವರ ಮೇಲೂ ಇದೇಥರದ ಘಟನೆ ನಡೆದಿತ್ತು. ಇದೀಗ ಛಲವಾದಿ ನಾರಾಯಣಸ್ವಾಮಿ ಅವರ ಮೇಲೆ ಪುನರಾವರ್ತನೆ ಆಗಿದೆ. ಅವರಿಗೆ ಪೊಲೀಸರು ರಕ್ಷಣೆ ನೀಡಬೇಕಿತ್ತು. ಅವರು ಭಾಗವಹಿಸಬೇಕಿದ್ದ ಮುಂದಿನ ಕಾರ್ಯಕ್ರಮದಲ್ಲಿ 2 ಸಾವಿರ ಜನರು ಕಾಯುತ್ತಿದ್ದರು ಎಂದು ವಿವರಿಸಿದರು.
5 ಗಂಟೆಗಳ ಕಾಲ ಅವರನ್ನು ಕೂಡಿ ಹಾಕಿದ್ದಾರೆ. ಅವರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಅವರಿಗೆ ಯಾವ ಕಾರ್ಯಕ್ರಮಕ್ಕೂ ತೆರಳಲು ಬಿಡದೆ ಜಿಲ್ಲೆಯಿಂದ ಹೊರಕ್ಕೆ ಕರೆತಂದು ಬಿಟ್ಟಿದ್ದಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಅವರಿಗೆ ಅವಾಚ್ಯ ಶಬ್ದ ಅನಿಸಿದರೆ ಅದನ್ನು ಪ್ರಶ್ನಿಸಲು ಕೋರ್ಟ್ಗಳಿವೆ ಎಂದು ಗಮನ ಸೆಳೆದರು.
ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರವನ್ನು ಕಾಂಗ್ರೆಸ್ಸಿನವರಿಗೆ ಯಾರು ಕೊಟ್ಟರು? ಗುಲ್ಬರ್ಗದಲ್ಲಿ ಇಂಥ ಘಟನೆ ಮೊದಲೇನಲ್ಲ; ಇದು ಅವರಿಗೆ ಪ್ರತಿದಿನದ ಕಾಯಕ ಎಂದು ಟೀಕಿಸಿದರು. ಈ ಘಟನೆ ಮೂಲಕ ಕಾಂಗ್ರೆಸ್ಸಿನ ಗೂಂಡಾಗಿರಿ ಸ್ಪಷ್ಟಗೊಂಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಘಟನೆಯ ಹಿಂದೆ ಪ್ರಿಯಾಂಕ್ ಖರ್ಗೆ ಇರುವುದಾಗಿ ಮಾನ್ಯ ರಾಜ್ಯಪಾಲರಿಗೆ ತಿಳಿಸಿದ್ದೇವೆ. ನಾರಾಯಣಸ್ವಾಮಿಯವರಿಗೆ ಸೂಕ್ತ ರಕ್ಷಣೆ ಕೊಡಬೇಕು. ಕ್ರಮ ಕೈಗೊಳ್ಳದ ಪೊಲೀಸ್ ಅಧಿಕಾರಿಗಳು, ಅಲ್ಲಿ ಬಂದಿದ್ದ ಗೂಂಡಾಗಳ ವಿರುದ್ಧ ಕ್ರಮಕ್ಕೆ ಕೋರಿದ್ದಾಗಿ ವಿವರಿಸಿದರು. ಇದಾದ ಬಳಿಕ ಡಿ.ಜಿ.ಪಿ.ಗೂ ದೂರು ನೀಡುತ್ತೇವೆ ಎಂದು ಹೇಳಿದರು.